ಮತ್ತೆ ಮತ್ತೆ ಉದ್ಧರಿಸುವವರ ನಡುವೆ ಮತ್ತೊಂದು ಸಮ್ಮೇಳನ…
ಈ ಸಂದರ್ಭದಲ್ಲಿ ಬೆಂಗಳೂರನಲ್ಲಿಲ್ಲದಿದ್ದರೆ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯದೆ ಇದ್ದಿದ್ದರೆ, ಪ್ರತಿ ವರ್ಷದಂತೆ ಮತ್ತೆ – ಪತ್ರಿಕೆ, ಟೀವಿ, ಮತ್ತಿತರ ಮಾಧ್ಯಮಗಳ ನಡುವೆ ಮತ್ತೊಂದು ಸಮ್ಮೇಳನ ಮುಗಿದು ಹೋಗುತ್ತಿತ್ತು. ವಯಕ್ತಿಕವಾಗಿ ಇಲ್ಲಿಯವರೆಗೆ ಒಂದೂ ಸಮ್ಮೇಳನಕ್ಕೆ ಹಾಜರಿ ಹಾಕದ ಕಾರಣ ಹಾಗೂ ಸಣ್ಣದೊಂದು ಕುತೂಹಲ ಇಟ್ಟುಕೊಂಡು ಈ ಬಾರಿ ಮೊದಲೆರಡು ದಿನ ಹಾಜರಿ ಹಾಕಿ ಕಾಲುಳುಕಿಸಿಕೊಂಡು ಬಂದವರ ಪೈಕಿ ನಾನೂ ಒಬ್ಬನಾಗಿ ಈ ಮಾತು.
ಸಾಹಿತ್ಯ, ಸಾಹಿತಿ, ಸಮಿತಿ, ಪರಿಷತ್ತು, ಪುಸ್ತಕ, ಮಳಿಗೆ, ಮಾರಾಟ, ಮೈಕು, ಮೈಕಾಸುರರು, ಬ್ಯಾಂಡು, (ಬತ್ತಾಸು!), ಬಿಂದಿ, ಬಿಂದಿಗೆ, ಸ್ವಾಗತ, ಸತ್ಕಾರ, ಸಂಭ್ರಮ, ಸಂಭಾಷಣೆ, ಸಂ-ಭಾಷಣ…ಮುಂತಾದವುಗಳ ಒಳಗೊಳಗೆ ನಡೆದ ಮೂರು ದಿನಗಳ ಈ ಒಳಾಂಗಣ ಆಟ, ಮೂರು ವರ್ಷದಿಂದಲೂ ಅರ್ಧ ನಿರ್ಮಿತ ನಗರದಂತೆ ಕಾಣಿಸಿಕೊಳ್ಳುತ್ತಿರುವ – ಅಸಾಮಾನ್ಯ ಸಂಯಮದ – ಬೆಂಗಳೂರಿಗೆ, ನಿನ್ನದಾದರೂ ನಿರ್ಮಾಣ ಸ್ಥಿತಿ, ತನ್ನದು ಮಾತ್ರ ನಿರ್ನಾಮದ ಸ್ಥಿತಿ ಎಂದು ಸಾರುತ್ತಿದೆಯಾ ಎಂಬುದೊಂದು ಅನುಮಾನ ಸುಳಿಯುವಂತೆ ಮಾಡಿಸಿದ್ದು ಸುಳ್ಳಲ್ಲ. ಆದರೂ, ಬೆಂಗಳೂರು half constructed, ಕನ್ನಡ half destructed ಎಂದು ಸುಮ್ಮನೆ ಹೇಳುವುದು ಸಾಧ್ಯವಿಲ್ಲ. ಅದಕ್ಕೊಂದು ಆಧಾರವಿಲ್ಲದಿರುವ ಕಾರಣ, ಬೆಂಗಳೂರು ನಿರ್ಮಾಣ ಹಂತದಲ್ಲಿರುವ ಮತ್ತೊಂದು ಸಿಂಗಾಪುರವೆಂದೂ, ಕನ್ನಡ ಇವತ್ತಿಗೂ ’ಕಸ್ತೂರಿ ಕನ್ನಡ’ ಎಂದುಕೊಂಡೇ ಸಮ್ಮೇಳನವನ್ನು ಅನುಭವಿಸಬಹುದಾ ಅಂದುಕೊಂಡರೆ – ನಮ್ಮ ನಮ್ಮದೇ ಆದ ವಿಚಾರಗಳು ಅದಕ್ಕೂ ಅಡ್ಡಿಪಡಿಸುವ ಸಮಯ ಇದು.
ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವೂ ಸಹ ಬಹಳಷ್ಟು ಕಾರಣಗಳಿಂದಾಗಿ – ಕಡಿಮೆ ಸಾಹಿತ್ಯಿಕ ಮತ್ತು ಹೆಚ್ಚು ಮಾರುಕಟ್ಟೆ ಕೇಂದ್ರಿತ ವ್ಯವಹಾರದಂತೆ ಕಾಣಿಸಿದ್ದು ಸುಳ್ಳಲ್ಲ. ಕಿಶೋರ್ ಬಿಯಾನಿ ಎಂಬ ಬಿಗ್ ಬಝಾರ್ ಜನಕನೇನಾದರೂ ಈ ಸಾಹಿತ್ಯ ಸಮ್ಮೇಳನವನ್ನೂ, ಅದರ ಸುತ್ತ ಬೆಳೆದು-ನಿಂತ ಮಾರುಕಟ್ಟೆಯನ್ನೂ ನೋಡಿದ್ದರೆ ತಾನು ತಿಂಗಳಿಗೊಂದು ಸಮ್ಮೇಳನ ಮಾಡುತ್ತೇನೆಂದು ಘೋಷಿಸಿ, ಅದರ ಸುತ್ತ ಮತ್ತೊಂದು ಯಶಸ್ವೀ ವ್ಯವಹಾರ ಬೆಳೆಸುವ ಉದ್ದೇಶವೊಂದಕ್ಕೆ ಚಾಲನೆ ನೀಡುತ್ತಿದ್ದುದು ಖಂಡಿತ. ಬೌದ್ಧಿಕ ವಲಯವಾಗಬೇಕಿದ್ದ ಮೂರು ದಿನಗಳ ಸಮ್ಮೇಳನ, ಕೆಲವೇ ಕೆಲವು ಸಂದರ್ಭಗಳಲ್ಲಿ ನಿರೀಕ್ಷಿತ ಯಶಸ್ಸು, ಸಂಭ್ರಮ ಕಂಡಿದ್ದರೆ ಅದು ಕನ್ನಡದ ಪುಣ್ಯವೇ ಹೌದು. ಆದರೆ, ಆ ಯಶಸ್ಸಿಗೆ, ಸಂಭ್ರಮಕ್ಕೆ ಮಾನದಂಡ ಯಾವುದು? ಸೇರಿದ್ದ ಜನರ ದೃಷ್ಟಿಯಿಂದ ಇದು ಯಶಸ್ವೀ ಸಮ್ಮೇಳನ ಅಂದುಕೊಳ್ಳಲು ಯಾವ ಅಡ್ಡಿಯೂ ಇಲ್ಲ ಅನ್ನುವುದು ಒಂದು ಮಾನದಂಡ ಆಗಬಹುದಾ? ಸಾಹಿತ್ಯ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ನಿರ್ದಿಷ್ಟ ವ್ಯಕ್ತಿ, ವಸ್ತು, ವಿಷಯದ ಸುತ್ತ ಕೇಂದ್ರೀಕೃತವಾಗಬೇಕಿದ್ದ ಸಮ್ಮೇಳನ ಅದೊಂದು ಬಿಟ್ಟು ಮತ್ತೆಲ್ಲ ಆಗಿದೆಯಾ? ಅಥವಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬುದು ಹೀಗೆಯೇ, ಇಂತೆಯೇ ಇರಬೇಕೆಂದು ಭಾಷ್ಯ ಬರೆದಿಡಲಾಗಿದೆಯಾ? ನಗರ ಕೇಂದ್ರಿತವಾಗುತ್ತಿರುವ ಬದುಕಿನಲ್ಲಿ ಕಳೆದುಹೋಗುತ್ತಿರುವ ಊರು, ಜಾತ್ರೆ, ಹಬ್ಬ… ಎಲ್ಲ ವರ್ಷಕ್ಕೊಮ್ಮೆ ಒಂದೇ ಊರಿನಲ್ಲಿ ಒಟ್ಟಾರೆ ಸಿಗುವ ಅಲಿಖಿತ ಒಪ್ಪಂದದಂತೆ ನಡೆಯುತ್ತದಾ ಈ ಕನ್ನಡದ ಜಾತ್ರೆ?
ಆಯೋಜಿಸುವುದು ಸರಿ. ಆದರೆ, ಯಾವ ಮೂಲ ಉದ್ದೇಶದ ಈಡೇರಿಕೆಗಾಗಿ, ’ಈ ರೂಪದಲ್ಲಿ’ ನಡೆಯಬೇಕು ಸಮ್ಮೇಳನ? ಹೀಗೇ ನಡೆಯುವುದೇ ಸರಿಯಾದ ರೀತಿಯಾ? ಇದಕ್ಕೊಂದು ಬೇರೆಯದೇ ಆದ ರೂಪ ಕೊಡುವುದು ಸಾಧ್ಯವಿಲ್ಲವಾ? ಅಥವಾ ಅಂಥದ್ದೊಂದು ವಿಚಾರದ ಅವಶ್ಯಕತೆಯೇ ಇಲ್ಲವಾ?
ಒಂದರ ಹಿಂದೊಂದು ಪ್ರಶ್ನೆಗಳು..
ಪ್ರಶ್ನೆಗೊಂದು ಉತ್ತರದ ಅವಶ್ಯಕತೆಯೇ ಇಲ್ಲವೆಂಬಂತೆ ಒಂದರ ಹಿಂದೊಂದು ಸಮ್ಮೇಳನಗಳು, ಸಂಭ್ರಮಗಳು.. ಪ್ರತಿಯೊಂದೂ ಗುಂಪಿನಲ್ಲಿ ಗೋವಿಂದ. ನಿರೂಪಣೆಯೆಂಬ ಸಣ್ಣ (?) ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಂಡರೆ – ಸಮ್ಮೇಳನದ ವೇದಿಕೆಯ ಒಂದು ತುದಿಯಲ್ಲಿ ಮೈಕಿಗೆ ಬಾಯಿ ಹಚ್ಚಿ ಒದರುತ್ತಿದ್ದವ ಹಲವಾರು ನಿರೂಪಕರಲ್ಲೊಬ್ಬ. ಉಚ್ಚಾರ ಸ್ಪಷ್ಟವಿತ್ತು, ಗಂಟಲ ಗಟ್ಟಿಯಿತ್ತು ಎನ್ನುವುದು ಆತನ ಗುಣ. ಅದೇ ಸಮಯಕ್ಕೆ ಆತ – ’ದರ್ಪ ಮೆಟ್ಟಿದ ಸರ್ಪ’ ಎಂಬ ಜಗತ್ಪಸಿದ್ಧ ನಾಟಕದ ’ಕಾಳಿಂಗ’ನ ಪಾತ್ರಧಾರಿಯಂತೆ ಆಡುತ್ತಿದ್ದುದೂ, ಅವನ ಭಯಂಕರ ಮಾತಿನ ಮೋಡಿಯಲ್ಲಿ ವೇದಿಕೆಯ ಮೇಲೆ ಕೆಳಗಿದ್ದವೆರೆಲ್ಲ ಸಂಪೂರ್ಣವಾಗಿ ಕಳೆದು ಹೋದದ್ದೂ ಸುಳ್ಳಲ್ಲ. ಒಬ್ಬ ನಿರೂಪಕನಿಗೂ, ಅರ್ಥಧಾರಿಗೂ, ನಾಟಕ ಪಾತ್ರಧಾರಿಗೂ ಇರಬೇಕಾದ ಮತ್ತು ಅವರು ಅಳವಡಿಸಿಕೊಳ್ಳಬೇಕಾದ ಮಾತಿನ ಧಾಟಿಯೇ ಬೇರಲ್ಲವಾ? ಸಮ್ಮೇಳನದ ನಿರೂಪಕ ನಾಟಕ ಮಾಡತೊಡಗಿದರೆ ಹೇಗೆ?
ಇರಲಿ. ನಿರೂಪಣೆ, ಧ್ವನಿ, ಬಿಸಿಲು, ಧೂಳು… ಮುಂತಾದ ಸಣ್ಣಪುಟ್ಟ ದೂರುಗಳನ್ನೆಲ್ಲ ಸುತ್ತಿಟ್ಟ ಸಮ್ಮೇಳನದ ಪೆಂಡಾಲುಗಳಲ್ಲಿ ಮುಚ್ಚಿ ಅದೇ ಮೈದಾನದಲ್ಲಿ ಮೂರಡಿ ಅಗೆದು ಹೂತಿಟ್ಟು, ಅದರ ಮೇಲೊಂದು ವೇಲಂಟೈನ್ ಡೇಗಾಗಿ ಬಂದ ಕೆಂಪು ಹೂವಿಟ್ಟುಬಿಡುವ. ಆದರೆ, ಗಮನ ವಹಿಸಬೇಕಾದ ವಿಷಯಗಳಿವೆಯಲ್ಲ – ಅವನ್ನೇನು ಮಾಡಬೇಕು? ಯಾವ ನಿರೀಕ್ಷಿತ ಕಾರಣಕ್ಕಾಗಿ ಸಮ್ಮೇಳನವನ್ನು ಅನುಭವಿಸಬೇಕು? ಯಶಸ್ವಿಯೆಂದು ಗುರುತಿಸಬೇಕು?
ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ, ಕನ್ನಡ – ಕನ್ನಡಪರ ಸಂವೇದನೆಯ ದಿಕ್ಕಿನಿಂದ, ಸಾಹಿತಿಗಳ ಇರುವು ಮತ್ತು ಅವರ ಕೃತಿಗಳ ಲಭ್ಯತೆಯಿಂದ, ವಿಮರ್ಷಾತ್ಮಕ ದೃಷ್ಟಿಕೋನದಿಂದ…. ಮತ್ತೆ ಇನ್ನೂ ಯಾವ ಯಾವ ಕಾರಣಕ್ಕಾಗಿ ಈ ಸಮ್ಮೇಳನ? ಇಲ್ಲಾ, ಇವೆಲ್ಲ ಕಾರಣಗಳನ್ನು ಒಟ್ಟಿಗೆ ಸೇರಿಸಿ ಒಂದು ಸಮ್ಮೇಳನ ಅನ್ನುವುದಾದರೆ, ಆ ಎಲ್ಲ ಅಂಶಗಳನ್ನೂ ಒಳಗೊಂಡಿತ್ತಾ ಈ ಸಮ್ಮೇಳನ?
ಹೌದು ಅನ್ನುವುದು ಉತ್ತರವಾಗುತ್ತದಾದರೆ ಸರಿ. ಇಲ್ಲವಾದರೆ, ಒಟ್ಟಾರೆ/ಶೇಕಡಾವಾರು ಲೆಕ್ಕವಾಗುತ್ತದೆ. ಅದೂ ಇಲ್ಲದಿದ್ದರೆ, ಮತ್ತೇನಿಲ್ಲ – ಮುಂದಿನ ತಯಾರಿ.
ರಥ ಗಂಗಾವತಿಗೆ ಹೊರಡುತ್ತದೆ. ಮತ್ತೊಂದು ವಿಶೇಷ. ಮತ್ತೆ ಮುಖಪುಟ ಸುದ್ದಿ. ವರದಿ, ವಿಶೇಷಾಂಕ. ನೀವಲ್ಲಿ, ಪೆಂಡಾಲಿನೊಳಗೋ, ಮರದ ಕೆಳಗೋ ನಿಂತಿದ್ದರೆ, ಪಕ್ಕದಲ್ಲೊಬ್ಬರು ವೀರಾವೇಶದಲ್ಲಿ ಘೋಷಿಸುತ್ತಿರುತ್ತಾರೆ – ’ನಾನು ಮತ್ತೆ ಮತ್ತೆ ಉದ್ಧರಿಸಿದೆ. ಎಷ್ಟು ಹೇಳಿದರೇನು ಪ್ರಯೋಜನ? ಇವರೆಲ್ಲಾ ನಾಲಾಯಖ್ಖು I say. ಖನ್ನಡಾ ಉದ್ಧಾರಾ ಆದಾಂಗೆ… I will not tolerate this. Too much it is….’ ಕಿವಿ ತುಂಬಿಕೊಂಡು ಜಾಗ ಬದಲಿಸಿದರೆ, ಸಮ್ಮೇಳನ, ಭಾಷಣ, ಘೋಷಣೆ, ವರದಿ – ವಾಚನ, ಜನ, ಸದ್ದು, ಗದ್ದಲ, ಮಳಿಗೆ – ಮಾರಾಟ….ಈ ಲೊಕದ ಪರಿವೆಯೇ ಇಲ್ಲದೆ ನಾಲ್ಕು ಬೆರಳುಗಳ ನಡುವೆ ಹುಡಿ ಹಾರಿಸಿ ಶೇಂಗಾ ತಿನ್ನುವ ಸಪೂರ ಹೆಂಗಸು. ಅವಳನ್ನೂ ಸೇರಿಸಿ ಪೂರ್ತಿ ಸಮ್ಮೇಳನವನ್ನು ಕಾಣಿಸುವ ಟೀವಿಗಳು. ಭಯಂಕರ ಕೆಲಸ ಸಿಕ್ಕ ಖುಷಿಯಲ್ಲಿ ಹಾರ ಹಾಕಿಕೊಂಡು ಓಲಾಡುವ ಪತ್ರಕರ್ತ ಮಿತ್ರರು. ಮಳಿಗೆಳೊಳಗೆ ಸುಮ್ಮನೆರಡು ಪುಸ್ತಕ ಕದಿಯುವವರು, ಜಗತ್ತಿನಲ್ಲೆಲ್ಲೂ ಸಿಗಲಾರದೆಂಬಂತೆ ಇಪ್ಪತ್ತೇ ಇಪ್ಪತ್ತು ರುಪಾಯಿ ಕೊಟ್ಟು ಚೆಡ್ಡಿ ಖರೀದಿಸುವವರು…. ಒಂದಾ ಎರಡಾ? ದಿನವೊಂದನ್ನು ನಾಲ್ಕು ಭಾಗ ಮಾಡಿದಂತೆ ಕಂತಿನಲ್ಲಿ ಬಂದು, ಕುರ್ಚಿ ತುಂಬಿಸಿ, ಕಂತಿನಲ್ಲೇ ಹೋಗುವ ಕನ್ನಡಿಗರು, ವಿಶೇಷ ವಲಯದಲ್ಲಿ ಆಸೀನರಾಗುವ VVIP, VIPಗಳು. ಬಾಸಿಂಗವೊಂದು ಬಿಟ್ಟು ಉಳಿದೆಲ್ಲ ಎರಿಸಿಕೊಂಡೇ ಇರುವ ವಿಶೇಷ ವ್ಯಕ್ತಿತ್ವಗಳು…. ಎಲ್ಲವುಗಳ ನಡುವೆ ಅಧ್ಯಕ್ಷರ ಕೇಳಲೇಬೆಕಾದ ಮಾತುಗಳು, ಮತ್ತಿಷ್ಟು ವಿಶೇಷ ಭಾಷಣಗಳು, ಹೇಳಿಕೆಗಳು, ಘೋಷಣೆಗಳು, ಹಾಡುಗಳು….
ಎಲ್ಲ ಒಟ್ಟಿನಲ್ಲಿ ದಕ್ಕಿಸಿಕೊಳ್ಳಬಹುದಾ?
ಅದು ಸಾಧ್ಯವಾಗದೇ ಹೋದರೆ, ಮಧ್ಯಮದ ಸಹಾಯ ಪಡೆಯಬೆಕು. ವರದಿಗಳನ್ನು ಕೇಳಬೇಕು, ಓದಬೇಕು… ಸಮ್ಮೆಳನದ ಜಾಗವೇನಿದ್ದರೂ ಜಾತ್ರೆ ಪೇಟೆಯಷ್ಟೆ.
ಸಮ್ಮೇಳನಕ್ಕೊಂದು ಹಾಜರಿ ಹಾಕಿ, ಪೂರ್ತಿಯಾಗಿ ಅನುಭವಿಸುವುದಕ್ಕೂ, ಮಾಧ್ಯಮದ ಮೂಲಕ ತಿಳಿದುಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂದೇ ನನ್ನ ನಂಬಿಕೆ. ಅದು Virtual ಜಗತ್ತಿಗೂ Actual ಜಗತ್ತಿಗೂ ಇರುವ ವ್ಯತ್ಯಾಸ. (ಈ ವ್ಯತ್ಯಾಸ ಇಂತಹ ಸಂದರ್ಭಗಳಲ್ಲಿ, ಅದಲು ಬದಲಾಗುತ್ತಿರುವ ಸಂಭವವೂ ಇದೆ.) ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ತಿಯಾಗಿ ಮಾಧ್ಯಮದ ಮುಖಾಂತರವೇ ಸಿಗುವುದಾದರೆ ಮತ್ತು ಆಯೋಜಿಸಲ್ಪಟ್ಟ ಕಾರ್ಯಕ್ರಮ ದೊಡ್ಡ ಪ್ರಮಾಣದ ಜಾತ್ರೆಯೇ ಆಗುವುದಾದರೆ, ಓಟ್ಟಾಗಿ ಆಯೋಜಿಸಲ್ಪಡುವ ಈ ಕಾರ್ಯಕ್ರಮ ಎರಡು ಬೇರೆ ಬೇರೆ ರೂಪದಲ್ಲಿ ದೊರೆಯಬಾರದು??
ಎಷ್ಟೆಲ್ಲ (?) ಖರ್ಚು ಮಾಡುವ, ಖರ್ಚಿನ ವಿಷಯದಲ್ಲಿ ಎಲ್ಲರನ್ನೂ/ಸಂದರ್ಭಗಳಲ್ಲಿ ಕನ್ಪ್ಯೂಜ್ ಮಾಡುವ (ಚುಲ್ ಬುಲ್?) ಎಲ್ಲ ದೊಡ್ಡ ಜನರಲ್ಲಿ ಇಷ್ಟೇ ಅಲ್ಲ ಮತ್ತೂ ಬೇಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಶಕ್ತಿಯಿದೆ. ಅದಿಲ್ಲದಿದ್ದಲಿ, ಕನ್ನಡಮಾತೆ ಎಲ್ಲರಿಗೂ ಆ ಶಕ್ತಿಯನ್ನು ಕೊಡಲಿ…
houdu..