ಘಟ್ಟದ ಮೇಲೆ – ಘಟ್ಟದ ಕೆಳಗೆ
ಉತ್ತರ ಕನ್ನಡದಲ್ಲೊಂದು ರೇಖೆ ಹಾದು ಹೋಗುತ್ತದೆ. ಕೇವಲ ಈ ಜಿಲ್ಲೆಗಷ್ಟೇ ಸೀಮಿತವಾಗಿರುವ ರೇಖೆ – ಘಟ್ಟದ ಮೇಲೆ ಹಾಗೊ ಘಟ್ಟದ ಕೆಳಗೆ ಎಂದು ’ಉ.ಕ’ವನ್ನು ವಿಭಜಿಸಿ ನಡುವೆ ತಟಸ್ಥವಾಗಿ ಉಳಿದುಬಿಟ್ಟಿದೆ. ಯಾವ ಮಹತ್ವದ ಕಾರಣಕ್ಕಾಗಿ ಇದೊಂದು ಹೆಚ್ಚುವರಿ ರೇಖೆ ಹುಟ್ಟಿಕೊಂಡಿತು ಹಾಗೂ ಯಾರು ಈ ರೇಖೆಯನ್ನೆಳೆದು ಉಧ್ಗಾಟಿಸಿದರು ಅನ್ನುವುದು ಈ ಹೊತ್ತಿನವರೆಗೂ ಮಹತ್ವದ ವಿಷಯವಲ್ಲ. ಘಟ್ಟದ ಮೇಲಿನವರು, ’ಘಟ್ಟದ ಕೆಳಗೆ’ ಹಾಗೂ ಘಟ್ಟದ ಕೆಳಗಿನವರು, ’ಘಟ್ಟದ ಮೇಲೆ’ ಅನ್ನುವಷ್ಟಕ್ಕೆ ಮಾತ್ರ ಸೀಮಿತ. ಅಷ್ಟರ ಹೊರತಾಗಿಯೂ ಒಮ್ಮೊಮ್ಮೆ ’ಸೂಕ್ಷ್ಮ’ವಾಗುತ್ತದೆ ಈ ರೇಖೆ – ಒಂದು ರೀತಿಯಲ್ಲಿ ಮನೆಯೊಳಗಿನ ವ್ಯವಹಾರ ಅದು. ಪಾತ್ರಗಳು ಅದಲು-ಬದಲಾಗುತ್ತಿರುತ್ತವೆ!!
ಭೌಗೋಳಿಕ ಕಾರಣಗಳಿಂದಾಗಿ ಇಂಥದ್ದೊಂದು – ಉಪದ್ರವಕಾರಿಯಲ್ಲದ – ವಿಭಜನೆ ಆಗಿಲ್ಲವಾದರೂ ಸರಿ. ಅದೇ ಕಾರಣಕ್ಕೆ ಆಗಿದ್ದರೆ ಮತ್ತೂ ಸರಿ. ಘಟ್ಟದ ಕೆಳಗಿನ ಊರುಗಳಿಗೆ ತೀರದ ಶಬ್ದದ ಆಸರೆಯಾದರೆ, ಘಟ್ಟದ ಮೇಲಿನ ಪ್ರದೇಶಕ್ಕೆ ಮಲೆಯ ಆಸರೆ. ಘಟ್ಟದ ಕೆಳಗಿನ ಉತ್ತರ ಕನ್ನಡ ಅಲೆಯ ಸೆರಗು ಬೀಸಿದರೆ, ಘಟ್ಟದ ಮೇಲೆ ಮಲೆಯ ಸೆರಗು. ಬಹಳ ಸೆಖೆಯೆಂದೂ, ಸಿಕ್ಕಾಪಟ್ಟೆ ಚಳಿಯೆಂದೂ ಅವರು ಇವರಿಗೆ, ಇವರು ಅವರಿಗೆ ಹೇಳುತ್ತಿರುವುದು ಜನರ ಆಪ್ತತೆಯನ್ನು ತೋರಿಸುತ್ತದಷ್ಟೆ. ಜೊತೆಗೆ- ನಿರ್ಲಿಪ್ತತೆಯನ್ನೂ.
ತನ್ನೊಳಗೆ ಒಡೆದು ಎರಡಾಗುವ ಸಂದರ್ಭವೊಂದನ್ನೂ ಎದುರುಗೊಂಡಿದ್ದ ಉತ್ತರ ಕನ್ನಡ ಇವತ್ತಿಗೂ ಇಡಿಯಾಗಿ ಹಿಡಿದುಕೊಂಡಿದ್ದರೆ, ಒಂದು ಬದಿಯಲ್ಲಿ ವಿಪರೀತ ಸೆಖೆ ತಟ್ಟದಿದ್ದುದೂ, ಇನ್ನೊಂದು ಬದಿಯಲ್ಲಿ ಹೆಚ್ಚೇ ಅನ್ನುವಷ್ಟು ಚಳಿಯಾಗದೆ ಇದ್ದುದೇ ಕಾರಣವಾ? ವ್ಯಾಪಕವಾಗಿ ಬೆಳೆಯುತ್ತಿರುವ ದಕ್ಷಿಣ ಕನ್ನಡ, ನಿರೀಕ್ಷೆ ಮೀರಿದ ಚಟುವಟಿಕೆಗಳನ್ನು ನೋಡುತ್ತಿರುವ ಶಿವಮೊಗ್ಗ, ತನ್ನದೇ ಆದ ಮಣ್ಣ ವಾಸನೆ ಹೊತ್ತ ಹುಬ್ಬಳ್ಳಿ-ಧಾರವಾಡಗಳ ನಡುವೆ, ಇನ್ನೂ ಘಟ್ಟದ ಮೇಲೆ, ಘಟ್ಟದ ಕೆಳಗೆ ಅನ್ನುತ್ತ ಮೇಲೆ-ಕೆಳಗೆ ನೋಡುತ್ತಿದೆ ಉತ್ತರ ಕನ್ನಡ. ಒಂದು ರೀತಿ ತ್ರಿಶಂಕು ಸ್ವರ್ಗದಲ್ಲಿರುವಂತೆ ಭಾಸವಾಗುವ ಜಿಲ್ಲಾ ಕೇಂದ್ರದ ಮೈತುಂಬ ಸರಕಾರೀ ಗಾಯ. ಅಲ್ಲೀಗ ತರಕಾರಿ ಬೆಳೆಯುವುದೂ ಸಹ ಕಷ್ಟಸಾಧ್ಯ.
ಪ್ರತಿಯೊಂದು ವಿಷಯದಲ್ಲೂ ’ವಿಪರೀತ’ಕ್ಕೆ ಹೆಚ್ಚಿನ ಮಹತ್ವವಿರುವ, ನೈತಿಕತೆ, ಸ್ಪರ್ಧೆ, ವ್ಯಾಪಾರ -ವ್ಯವಹಾರ ಮುಂತಾದ ಶಬ್ಧಗಳ ಪರಿಭಾಷೆಯೇ ಬದಲಾಗುತ್ತಿರುವ ದಿನದಲ್ಲಿ, ಉತ್ತರ ಕನ್ನಡ ಇಡಿಯಾಗಿ ತನ್ನನ್ನು ರೂಪಿಸಿಕೊಳ್ಳಬೇಕಾ ಈಗ? ಪೂರ್ತಿಯಾಗಿ ತನ್ನನ್ನು ಬೆಳೆಸಿಕೊಡಬಹುದಾದ ರೇಖೆಯೊಂದನ್ನು ತನ್ನದೇ ಮೈಸುತ್ತ ಎಳೆದುಕೊಳ್ಳಬೇಕಾ? ತನ್ನನ್ನು ತಾನೇ ರೂಪಿಸಿಕೊಂಡು ಸುತ್ತಲಿನ ಜಿಲ್ಲೆಗಳ ಸಮಕ್ಕೆ ನಿಲ್ಲುವ ದಾರಿ ಒಂದಾದರೆ, ದೊಡ್ದ ಯೋಜನೆಗಳಿಗೆ ತನ್ನನ್ನು ಒಡ್ಡಿಕೊಂಡು ಕಾಣದ ಕೈಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವುದು ಇನ್ನೊಂದು ದಾರಿ. ಅಷ್ಟು ಬಿಟ್ಟರೆ, ಮೂರನೆಯ ದಾರಿ ಯಾವುದು?
ಒಂದು ತಲೆಮಾರಿನವರು ಊರು ಬಿಟ್ಟು ಮುಂಬೈ ಸೇರಿಕೊಂಡರೆ, ನಂತರದವರು ಬೆಂಗಳೂರು ಸೇರಿದರು. ಹಲವಾರು ಕಾರಣಗಳಿಗೆ ಮುಂಬೈ ಹೊಕ್ಕವರು ಅಲ್ಲಿನವರೇ ಆಗಿ, ಬೆಂಗಳೂರು ಸೇರಿದವರು – ಕೆಲವು ಸಂದರ್ಭದಲ್ಲಿ – ಎಲ್ಲಿಯವರೂ ಆಗದೇ ಉಳಿದುಬಿಟ್ಟಂತಿದೆ. ನಂತರದ ಬೆಳವಣಿಗೆ ವೈಮಾನಿಕ. ಒಂದು ಸ್ವರ್ಗದಿಂದ ಸೀದಾ ಇನ್ನೊಂದು ಸ್ವರ್ಗಕ್ಕೆ ಪ್ರಯಾಣ ಈಗ. ವರ್ಷಕ್ಕೊಮ್ಮೆ ಕುಲದೇವರಿಗೋ!, ಜಾತ್ರೆಗೋ ಅಥವಾ ಊರಿನ ಸೆಳೆತವೆಂದೋ ಒಮ್ಮೆ ಬಂದು ಹೋಗುವ ಸಾಧ್ಯತೆಯೂ ಸಹ ಕಡಿಮೆ. ಇಂತಹ ಬೆಳವಣಿಗೆ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತವಲ್ಲದಿದ್ದರೂ, ಅಲ್ಲಿನ ಬಾಕಿ ಸಂಗತಿಗಳೊಂದಿಗೆ ಹೋಲಿಸಿದಾಗ ಹೆಚ್ಚು ಪ್ರಸ್ತುತವಾಗುತ್ತದೆ.
ಒಂದು ಹಂತದಲ್ಲಿ ಹೆಚ್ಚಿನವರೆಲ್ಲ ಮಾಸ್ತರುಗಳಾಗಿಬಿಟ್ಟರು, ತಮ್ಮ ತಮ್ಮ ಊರಲ್ಲಿ. ಇದ್ದ ಹತ್ತಿಪತ್ತು ಗುಂಟೆ ಜಾಗ(ಜಾಸ್ತಿ ಇದ್ದರೂ ಅದು ಅವರಿಗೇ ತಾನೆ?) ಹಾಗೂ ಬಂದ ಪಗಾರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೊರಟವರು, ತಮ್ಮ ಜಿಲ್ಲೆ ಬಿಟ್ಟು ಹೊರಬಂದು – ಮತ್ತದೇ ನೆಲೆಯಲ್ಲಿ ಜೀವನ ಮಾಡಿದರು. ಮುಂದಿನ ತಯಾರಿಯಾಗಿ, ಪ್ರಕಾಶಿಸುತ್ತ ನಡೆದ ಬೃಹತ್ ಭಾರತ ದೇಶದಲ್ಲಿ, ಹತ್ತು ಹಲವು ಅವಕಾಶಗಳು ಬಂದವು. ಉತ್ತರ ಕನ್ನಡಿಗರು ಪೂರ್ವ, ಪಶ್ಚಿಮ, ದಕ್ಷಿಣಕ್ಕೆ ನಡೆದರು. ಸಂಬಳ ಹೆಚ್ಚಾಯಿತು. ಜೊತೆಗೆ ಖರ್ಚೂ. ಊರು ಮಾತ್ರ ಉತ್ತರವಿಲ್ಲದೇ ಉಳಿದುಬಿಟ್ಟಿತು.
ಎಲ್ಲ ಬೆಳವಣಿಗೆಗಳೂ ಆಗಲೇಬೇಕಿತ್ತು, ಹೀಗಿದ್ದರೇ ಸರಿ/ಹೀಗಾಗುವುದೇ ಸರಿ, ಉತ್ತರ ಕನ್ನಡ ಉತ್ತರ ಕನ್ನಡವಾಗಿಯೆ ಇರಲಿ – ಅದು ದಕ್ಷಿಣ ಕನ್ನಡವೋ ಅಥವಾ ಮತ್ತೊಂದು ಜಿಲ್ಲೆಯಂತೋ ಆಗುವುದು ಬೇಡ, ಉತ್ತರ ಕನ್ನಡ ಹೀಗಿದ್ದರೇ ಒಳ್ಳೆಯದು…. ಹಲವು ಸುದ್ದಿಗಳು ಹೊರಬೀಳುತ್ತಿವೆ ಈಗ. ತಮ್ಮ ಮನೆಯಲ್ಲೆ ಉಳಿದುಕೊಂಡ ಉತ್ತರ ಕನ್ನಡಿಗರಿಗೆ ಸಾಲ ತೀರಿಸುವುದೋ, ಮನೆ ಉಳಿಸಿಕೊಳ್ಳುವುದೋ, ಪಕ್ಕದ ಜಿಲ್ಲೆಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಪಡೆಯುವುದೋ… ಯಾವುದೂ ತಿಳಿಯದ ಸ್ಥಿತಿ. ಸ್ವಲ್ಪ ಗೆಲುವಾದರೆ (ಅಥವಾ ಗೆಲುವಿದ್ದವರಾದರೆ?), ಎಲ್ಲೋ ಇರುವ ಮಕ್ಕಳು ಮರಿಯ ಜೊತೆ ಚಾಟ್ ಮಾಡಬೇಕು. ಅನುಕೂಲವಾದರೆ ಒಂದೆರಡು ವಾರ ಹೋಗಿ ಇದ್ದು ಬರಬೇಕು. ಎಲ್ಲ ಹೋಗಿ ಬರುವವರ ಆಟ…
ಉತ್ತರ ಕನ್ನಡವೀಗ ತನ್ನೊಳಗೆ ಸೃಷ್ಟಿಯಾದ ರೇಖೆಯನ್ನೇ ಹಿಡಿದಿದುಕೊಂಡಿದೆ ಆಸರೆಗಾಗಿ. ಊರುಗಳು ತಾಲೂಕನ್ನೂ, ತಾಲೂಕುಗಳು ಜಿಲ್ಲೆಯನ್ನೂ ನೋಡುತ್ತಿವೆ. ಜಿಲ್ಲಾ ಕೇಂದ್ರದ ಸುತ್ತ ಕೇಂದ್ರ ಮತ್ತು ರಾಜ್ಯದ ಹದ್ದುಗಣ್ಣು. ಒಂದರ ಹಿಂದೊಂದು, ಅಭಿವೃಧಿ ಪಥದತ್ತ ಹೊರಟ, ಯೋಜನೆಗಳು. ಗಟ್ಟಿಯಾಗಿ – ಬೇಕು ಅಥವಾ ಬೇಡ ಎನ್ನಲೂ ಆಗದಂಥಾ ಪರಿಸ್ಥಿತಿ. ನಿರಂತರವಾಗಿ ಬೆಳೆಯುತ್ತಿರುವ ಜಗತ್ತಿನ ನಡುವೆ, ಆದಷ್ಟೇ ಬೆಳವಣಿಗೆಯೆಂಬಂತೆ ತನ್ನನ್ನು ತೋರಿಸಿಕೊಳ್ಳುತ್ತಿದೆ ಉತ್ತರ ಕನ್ನಡ.
ಭರ್ತಿ ಮಳೆ, ತೀರದ ಶಬ್ಧದ ಜೊತೆಗಿದ್ದೂ ತನ್ನನ್ನು ತೊಳೆದುಕೊಳ್ಳಲಾರದ ಸ್ಥಿತಿಯಾ ಇದು?
ಜಿಲ್ಲೆಯ ಹೊರಗಿರುವವರೆಲ್ಲ, ವರ್ಷದ ಅಂತ್ಯದಲ್ಲಿ ಸಿಗಬೇಕಾದ ಬಡ್ತಿ, ಹೆಚ್ಚಿನ ಸಂಬಳ, ಭವಿಷ್ಯದ ಲೆಕ್ಕ ಹಾಕುತ್ತಿದ್ದಾರೆ. ಅವರೆಲ್ಲ ಖಂಡಿತವಾಗಿಯೂ ತಮ್ಮ ತಮ್ಮ ಊರು/ಜಿಲ್ಲೆಗಿಂತ ಹೆಚ್ಚಿನ ತೊಂದರೆಯನ್ನು ವಯಕ್ತಿಕವಾಗಿ ಅನುಭವಿಸುತ್ತಿದ್ದಾರೆ. ಡಾರ್ವಿನ್ನನ ಥಿಯರಿ ಎಂದಿಗಿಂತ ಹೆಚ್ಚು ಈ ಊರು ಬಿಟ್ಟವರಿಗೆ ಅನ್ವಯವಾಗುತ್ತಿದೆ. ಉತ್ತರ ಕನ್ನಡಿಗರಿಗೆ ಮಾತ್ರ ಘಟ್ಟದ ಮೇಲೆ ಯಾವುದು, ಘಟ್ಟದ ಕೆಳಗೆ ಯಾವುದು ಎಂಬುದೂ ಮರೆತುಹೋದಂತಿದೆ!!
(KS (!) Link – http://www.kendasampige.com/article.php?id=4194)
ಪ್ರತಿಕ್ರಿಯೆಗಳು