ಬೇರೆ

27/11/2009 by Kallare

ಇಲ್ಲೇ ಪಕ್ಕದ ರಸ್ತೆಯಲ್ಲಿ ಸಿಕ್ಕು
ತಪ್ಪಿಸಿಕೊಂಡು ಮಾತ್ರದಲ್ಲಿ
ಈಗ ನಡೆಯುತ್ತಿದ್ದೇವೆ
ಥರ ಥರ ಹೆಜ್ಜೆಗಳನ್ನು ನಿರಂತರವಾಗಿ
ಸೃಷ್ಟಿಸುತ್ತ ಸಮಾನಾಂತರ ರೇಖೆ

ಆ ತಿರುವಿನ ಕೊನೆಯಲ್ಲಿ ನಾನು
ನೀವು ಒಟ್ಟೊಟ್ಟಿಗೆ ಬಂದು
ಹೆಜ್ಜೆಗೊಂದು ಹೆಜ್ಜೆ ಸೇರಿಸಿದ್ದು
ಹೆಜ್ಜೆಗೊಂದು ಮಾತು ಕೇಳಿಸಿದ್ದು
ಪ್ರತಿಯಾಗಿ ನಾನೊಂದು ದೇಶಾವರಿ
ನಗೆ ಹೊಡೆದು ತಡವರಿಸುತ್ತ
ನಡೆದದ್ದು ನಿಚ್ಚಳವಾಗಿ ಕಾಣಿಸುತ್ತದೆ

ಆ ತುದಿಯಿಂದ ಈ
ತುದಿಗೆ ಬರುವುದರೊಳಗೆ ಒಟ್ಟೊಟ್ಟಿಗೆ
ಸಿಕ್ಕ ಅಂಗಡಿಗಳೆದುರು ನಿಂತು
ನನಗೆ ನನ್ನನ್ನೇ ಕಾಣಿಸಿ
ಫಳ್ಳನೆ ಹೊಳೆಯುವ ಗಾಜಿನೊಳಗಿಂದ
ಹೊರಬರುವ ಆಕೃತಿಗಳಿಗೆ ಕಿಚಾಯಿಸಿ
ಉದ್ದಕ್ಕೂ ಮಜಾ ಉಡಾಯಿಸಿ ನಡೆದಿರಿ
ನನ್ನನ್ನೂ ಮರೆತು
ಪಕ್ಕದ ಸಮಾನಾಂತರ ರಸ್ತೆಗೆ

ಆಮೇಲಾಮೇಲೆ ನಿಮಗೆ ನಿಮ್ಮದೇ ವೇಗ
ನಿಯಂತ್ರಕಗಳಿಲ್ಲದೆ ಹೊತ್ತು-ಗೊತ್ತು 
ಇಲ್ಲದೆ ಅಲೆ ಅಲೆದು ಸುಸ್ತಾದರೂ
ನನ್ನ ಗಮನಕ್ಕೂ ಬಾರದಂತೆ ಎಚ್ಚರವಹಿಸಿ
ಬಿಟ್ಟಲ್ಲೇ ಬಿಟ್ಟು ಹೊರಟಿರಿ
ಹೌದಲ್ಲ – ಪಕ್ಕಾ ವ್ಯವಹಾರಸ್ಥರು ನೀವು
ನಿಮ್ಮದೇ ದಾರಿ ಸೃಷ್ಟಿಸಿಕೊಂಡಿರಿ – ನಂತರ?

ತಿರುಗಿ ನೋಡಿದಿರಲ್ಲ ಒಮ್ಮೆ
ದಾರಿಯುದ್ದಕೂ ಚೆಲ್ಲಾಪಿಲ್ಲಿ ಹೆಜ್ಜೆ
ಹುಚ್ಚು ಕುಣಿತ ಸಮಾ-ವೇಷ
ಪಕ್ಕದಲ್ಲೇ ಕೇಕೆ ಪೀಕೆ
ಟೀಕೆ ಟಿಪ್ಪಣಿ
ಕಳಚಿಕೊಂಡ ಉದ್ದೂದ್ದ ಸರಪಳಿ
ಈಗ ಕೂಡಿಸ ಹೊರಟಿದ್ದೀರಿ – ಅಲ್ಲವೇ?

ಸಿಕ್ಕಿಲ್ಲವೇ ಗುರುತು? ಹಿಡಿದಿಲ್ಲವೇ ಧ್ವನಿ?
ಅರೆ ಯಾಕೋ ಸಂಶಯ ಮಾಡುತ್ತೀರಲ್ಲ
ರಸ್ತೆ ಪಕ್ಕದ್ದೇ ಟಾರು ಅದೇ
ಕ್ರಮಿಸಿದ ದೂರ ಕಂಡ ದೃಶ್ಯ
ಎಲ್ಲಾ ಅದೇ ಅದೇ
ನಾನು ನೀವು ಮಾತ್ರ ಬೇರೆ ಬೇರೆ

ಬೇಲಿಯ ಆಚೆ ಮತ್ತು ಈಚೆ : ಒಂದು ತಣ್ಣಗಿನ ಕತೆಯ ಸುತ್ತ

23/11/2009 by Kallare

ಒಂದು ಬೇಲಿ. ಇಬ್ಬರು ಹುಡುಗರು. ಅಷ್ಟೇ ಸಾಕು ನೋಡುವವರಿಗೆ. ಮೊದಲ ನಿಮಿಷದಿಂದ ಕೊನೆಯವರೆಗೂ ಒಂದೇ ಹದದಲ್ಲಿ ಸಾಗುತ್ತದೆ ನೋಟ. ಎಲ್ಲೂ ನಿಲ್ಲುವುದಿಲ್ಲ. ’ದಿ ಎಂಡ್’ ಕಾಣಿಸಿ, ಭಾರವಾದ ಮನಸಿನೊಂದಿಗೆ ಹೊರಬರುತ್ತಾರೆ ಎಲ್ಲ. ಮೈಮುರಿಯುವುದಕ್ಕೆ, ಆಕಳಿಸುವುದಕ್ಕೆ, ಆಚೀಚೆ ನೋಡುವುದಕ್ಕೆ ಅವಕಾಶವೇ ಆಗುವುದಿಲ್ಲ. ಬದಲಿಗೆ ಮತ್ತೆ ಪ್ರಾರಂಭವಾಗುತ್ತದೆ ಚಿತ್ರ. ಒಳಗೊಳಗೆ ನಿಲ್ಲದೆ ಚಲಿಸುತ್ತದೆ ದೃಶ್ಯಾವಳಿ. ಅದು ಹಾಗೆ ಸುಮ್ಮನೆ ಮುಗಿಯುವುದಿಲ್ಲ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಓಡುತ್ತಿರುತ್ತದೆ. ಒಂದು ಲೆಕ್ಕದಲ್ಲಿ ’ಭಾರೀ’ ದಾಖಲೆಯಾಗಬಹುದು! ಆದರೆ ವಸ್ತುವಿನ ಒಳಹೊಕ್ಕವರಲ್ಲಿ ಮಾತ್ರ ’ದಾಖಲಾಗುತ್ತದೆ’. 

ಕಥೆಗಾರ, ಇಡೀ ಕತೆಯನ್ನು ಶುಭ್ರ ವಸ್ತ್ರದ, ನೀಟಾದ ಕ್ರಾಪಿನ, ಶಿಸ್ತುಬದ್ಧ ಎಂಟು ವರ್ಷದ ಚಿಕ್ಕ ಹುಡುಗನ ಕಣ್ಣುಗಳಲ್ಲಿ ನೋಡುತ್ತಾನೆ. ಆದರೆ ಕೇವಲ ಈ ಹುಡುಗನನ್ನೆ ಎದುರಿಗಿಟ್ಟುಕೊಂಡು ಹೆಜ್ಜೆ ಹಾಕುವುದಿಲ್ಲ ಆತ. ಆತನಿಗೊಂದು ಅವನದೇ ವಯಸ್ಸಿನ ಜೊತೆಗಾರನನ್ನು ತಂದು ನಿಲ್ಲಿಸುತ್ತಾನೆ. ಆ ಹುಡುಗನಿಗೊಂದು ಬೋಳು ಬೋಳು ತಲೆ. ಒಂದೆರಡು ಗಾಯ, ಮಣ್ಣು ಮಣ್ಣು ಬಟ್ಟೆ. ಹರಕು ಚಪ್ಪಲಿ. ಕೈಲೊಂದು ಮುರುಕು ಗಾಡಿ. ಈ ಹುಡುಗನಿಗೆ, ಸಮವಸ್ತ್ರ-ಶಾಲೆಯಾದರೆ, ಅವನಿಗೂ ಸಮವಸ್ತ್ರವಿದೆ. ಜೊತೆಗೆ ಕೆಲಸ… ಅವರಿಬ್ಬರ ಸುತ್ತ ಪಾತ್ರವರ್ಗ ಎದ್ದು ನಿಲ್ಲುತ್ತವೆ. ಹುಡುಗನಿಗೊಂದು ಅಕ್ಕ, ಅಪ್ಪ-ಅಮ್ಮ, ಅವರ ಸುತ್ತಲಿನ ಜನ, ಪರಿಸರ. ಮತ್ತೊಬ್ಬ ಹುಡುಗ ಸುತ್ತಲಿನ ಜನ, ಪರಿಸರ, ವಿಷಯ ಎನ್ನುತ್ತ ಕತೆಯ ಹಂದರ ಗಟ್ಟಿಗೊಳ್ಳುತ್ತದೆ. ಇಬ್ಬರು ಹುಡುಗರ ನಡುವೆ ಬೇಲಿ ಅಡ್ಡ ನಿಲುತ್ತದೆ. ಬೇಲಿ ಅಡ್ಡಿಯಾಗುತ್ತದೆ. ಅದೇ ಬೇಲಿ ಕಳಚಿಕೊಳ್ಳುತ್ತದೆ. ಕತೆ ಮುಂದುವರೆಯುತ್ತದೆ… 

ಹೀಗೆ ಚಿಕ್ಕ ಹುಡುಗನೊಬ್ಬನ ಕಣ್ಣಿನಲ್ಲಿ ಕಾದಂಬರಿಯೊಂದು ಅರಳಿ ಬಹಳಷ್ಟು ಚರ್ಚೆಯಾಗುತ್ತದೆ. ಮಕ್ಕಳಿಗಾಗಿ ಬರೆಯಲ್ಪಟ್ಟ ಈ ಕಾದಂಬರಿಯ ಮಾರಾಟ ಮೂರು ಮಿಲಿಯನ್ ದಾಟಿ ಮುಂದುವರೆಯುತ್ತದೆ. ಕಾಲ್ಪನಿಕ ಕತೆಯಾಗಿದ್ದರೂ,  ಒಂದು ನೈಜ ಘಟನೆಯಂತೆ ಓದಿಸಿಕೊಂಡು ಹೋಗುವ ಈ ಕಾದಂಬರಿ ತನ್ನೆಲ್ಲ ಹೆಸರು, ಚರ್ಚೆ, ವಿಮರ್ಷೆ, ಹೊಗಳಿಕೆ, ತೆಗಳಿಕೆಗಳ ನಡುವೆ ನಿರ್ದೇಶಕನೊಬ್ಬನೆ ಕೈಗೆ ಸಿಕ್ಕು, ಕೆಲವೊಂದು ಬದಲಾವಣೆಗಳೊಂದಿಗೆ,  ಸಿನೆಮಾ ಆಗಿ ತೆರೆಗೆ ಬಂದುಬಿಡುತ್ತದೆ. ಅಲ್ಲಿಂದ ಅದು ಮತ್ತೊಂದು ರೀತಿಯ ದೃಶ್ಯಾವಳಿ.

ತೊಂಬತ್ನಾಲ್ಕು ನಿಮಿಷಗಳ ಚಿತ್ರ ನಿಧಾನವಾಗಿ ಒಂದೊಂದೆ ನಿಮಿಷಗಳನ್ನು ಆಕ್ರಮಿಸುತ್ತಾ ಸಾಗುತ್ತದೆ. ಆ ನಿಮಿಷಗಳುದ್ದಕ್ಕೂ ಹಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಣಗಳು ಶಕ್ತಿಯುತವಾಗಿ ಹಾದುಹೋಗುತ್ತವೆ.  ಆದರೆ ನಿರ್ದೇಶಕರ ಗಮನ ಕೇಂದ್ರೀಕೃತವಾಗುವುದು ಇಬ್ಬರು ಹುಡುಗರ ಮೇಲೆ. ಅವರಿಬ್ಬರ ನಡುವಿನ ’ಬೇಲಿ’ಯ ಮೇಲೆ. ಬೇಲಿಯ ಎರಡೂ ಕಡೆಯಲ್ಲಿ ಯುದ್ಧವಿದೆ. ಒಂದೆಡೆಯಲ್ಲಿ ಯುದ್ಧ ಮಾಡಿಸುವವರು. ಅವರ ಯೋಧರು. ಇನ್ನೊಂದೆಡೆಯಲ್ಲಿ ಯುದ್ಧ ಸಂತ್ರಸ್ಥರು. ಕೈದಿಗಳು. ಒಬ್ಬರು ಗೆಲ್ಲುವವರಾದರೆ ಇನ್ನೊಬ್ಬರು ಸೋತವರು. ಬೇಲಿಯ ಈಚೆ ಅಟ್ಟಹಾಸವಿದ್ದರೆ, ಆಚೆ ಸಾವು. ಸಾವು ಮತ್ತು ಬದುಕಿನ ಬೇಲಿಯ ನಡುವೆ ಇನ್ನೂ ಬದುಕನ್ನು ಸರಿಯಾಗಿ ನೋಡಲಾರಂಭಿಸದ ಈ ಇಬ್ಬರು ಹುಡುಗರು. ಒಬ್ಬ ಸಾವಿನ ಯಜಮಾನನ ಯೋಧನ ಮಗನಾದರೆ, ಇನ್ನೊಬ್ಬ ಸಾವಿನ ಜೊತೆಗೇ ಬದುಕುತ್ತಿರುವವರ ಮಕ್ಕಳಲ್ಲೊಬ್ಬ.

ಯೋಧನ ಕನಸು ಕಣ್ಣುಗಳ ಮಗ ತನ್ನಪ್ಪನ ಜೊತೆ ಇರುವ ಎಲ್ಲಾ ಸೌಕರ್ಯಗಳನ್ನೂ ಬಿಟ್ಟು ಬರುತ್ತಾನೆ. ತನ್ನ ಮನೆ, ಶಾಲೆ, ಗೆಳೆಯರು, ಆಟ-ಪಾಠ…ಪ್ರತಿಯೊಂದೂ. ಈಗ ಬಂದಿರುವ ಹೊಸಮನೆಯ ಕಣ್ಣಳತೆಯಲ್ಲೇ ಬೇಲಿ. ದಿನಚರಿಯಲ್ಲಿನ ಬದಲಾವಣೆ, ಬೇಸರ ಹಾಗೂ ವೈಪರೀತ್ಯಗಳ ನಡುವೆ ಆತನಿಗೆ ಬೇಲಿಯ ಆಚಿನ ಬದುಕು ಕಾಣಿಸುತ್ತದೆ. ಅಲ್ಲಿನ ಸಮವಸ್ತ್ರದ ಜನ ಕಾಣಿಸುತ್ತಾರೆ. ಮಕ್ಕಳು ಕಾಣಿಸುತ್ತಾರೆ. ತನಗಿಂತ ಚಿಕ್ಕವನೆ ಇರಬಹುದಾದ ಹುಡುಗ ಕಾಣಿಸುತ್ತಾನೆ. ನಡುವೆ ಬೇಲಿಯಿದ್ದೂ ಅವರಿಬ್ಬರ ಮಧ್ಯೆ ಹೊಸ ಗೆಳೆತನವೊಂದು ಉದಯಿಸುತ್ತದೆ. ಬೆಳೆಯುತ್ತದೆ. ಬೇಲಿಯ ಆಚಿನ ಬದುಕು ಇವನಿಗೆ ಕುತೂಹಲದ್ದಾದರೆ, ಆಚಿನವನಿಗೆ ಈ ಬದುಕು. ಇಬ್ಬರು ಹುಡುಗರ ದೈನಂದಿನ ಭೇಟಿ ಮುಂದುವರೆಯುತ್ತದೆ. ಹಲವು ಕಾರಣಗಳಿಂದಾಗಿ ಕನಸು ಕಣ್ಣುಗಳ ಹುಡುಗನಿಗೆ ಬೇಲಿಯ ಆಚೆ ನುಸುಳುವ ಸಂದರ್ಭ ಒದಗಿಬರುತ್ತದೆ. ಆತನಿಗೀಗ ಆಚಿನ ಜಗತ್ತನ್ನು ನೋಡುವ ಆಸೆ.

ಇಬ್ಬರು ಮಕ್ಕಳ ಜೊತೆಗೇ ಸನ್ನಿವೇಶಗಳ ಬೆಳವಣಿಗೆಯಾಗುತ್ತ ಕತೆ ಮುಗಿಯುವ ಹಂತ ತಲುಪುತ್ತದೆ. ಕನಸುಗಣ್ಣಿನ ಹುಡುಗ, ತನ್ನ ಅಕ್ಕ ಮತ್ತು ಅಮ್ಮನ ಜೊತೆಗೂಡಿ ಹಿಂತಿರುಗುವ ಸಮಯ ಬರುತ್ತದೆ. ಅವರಿಗೀಗ ಹಿಂತಿರುಗುವಂತೆ ಅಪ್ಪನ ಆಜ್ನೆ ಸಿಕ್ಕಿದೆ. ಆದ್ರೆ, ತನ್ನ ಸಾಹಸ ಇನ್ನೂ ಮುಗಿದಿಲ್ಲ ಎಂಬಂತೆ ಉಟ್ಟ ಶುಭ್ರ ಬಟ್ಟೆ ಕಳಚಿಟ್ಟು, ಬೇಲಿಯಾಚಿನ ಗೆಳೆಯನ ಗೆರೆ ಗೆರೆಯಾದ ಸಮವಸ್ತ್ರ ಧರಿಸಿ ಆಚೆ ನುಸುಳಿಬಿಡುತ್ತಾನೆ. ಅವರಿಗೀಗ ಬೇಲಿಯೊಳಗಿನ ಹುಡುಗನ ಕಳೆದುಹೋಗಿರುವ ಅಪ್ಪನನ್ನು ಹುಡುಕಬೇಕು. ಆದರೆ, ಕಳೆದುಹೋದ ಅಪ್ಪ ಸಿಗದೇ ತಿರುಗಿ ಬಂದಲ್ಲಿಗೆ ಹೊರಡುವ ನಿರ್ಧಾರ ಮಾಡುವಷ್ಟರಲ್ಲಿ ಅವರಿಬ್ಬರೂ ಹಲವಷ್ಟು ಜನರಿಂದ ಸುತ್ತುವರಿಯಲ್ಪಡುತ್ತಾರೆ. ಪ್ರತಿಯೊಬ್ಬರೂ ಅವರಂತೆ ಸಮವಸ್ತ್ರದಲ್ಲಿರುವವರೇ.  ಅವರನ್ನು ಫೇರಿ ಹೊರಡಿಸಿಕೊಂಡು ಹೋಗುತ್ತದೆ ಕಾವಲುಗಾರರ ಪಡೆ. ತಾವೆಲ್ಲಿಗೆ ಹೋಗುತ್ತಿದ್ದೇವೆ ಅನ್ನುವ ವಿಚಾರ ತಿಳಿಯದೇ ನಡೆಯುತ್ತಾರೆ ಉಳಿದವರೊಡನೆ. ಅದೇ ಸಮಯಕ್ಕೆ ಬರಲಾರಂಭಿಸಿದ ಮಳೆಯಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಿದ್ದಾರೆ ಅನ್ನುವ ಭರವಸೆಯಲ್ಲಿ ಜನರ (ಜನರಲ್ಲದವರ?) ನಡುವೆ ನಿಲ್ಲುತ್ತಾರೆ – ಒಬ್ಬರಿಗೊಬ್ಬರು ಕೈಹಿಡಿದು.  ಅಲ್ಲಿಂದ ಮುಂದಿನ ಕೆಲವು ನಿಮಿಷಗಳಲ್ಲಿ ಎಲ್ಲ ಮುಗಿದುಹೋಗುತ್ತದೆ. ತಣ್ಣಗಿನ ಕ್ರೌರ್ಯ ಅದು… ಹೊರಬಂದ ನಂತರ ಕಾಡುವುದು ಅದೇ ಜಾಗ, ಅದೇ ಭಾಗ.

ನೀವು ನೋಡಿಲ್ಲದಿದ್ದರೆ ಕೂಡಲೇ ನೋಡಬೇಕಾದ, ನೋಡಿದಿದ್ದಲ್ಲಿ ಮತ್ತೊಮ್ಮೆ ನೋಡಬೇಕೆಂದುಕೊಳ್ಳುವ ಚಿತ್ರ ಕೊಟ್ಟಿದ್ದಾನೆ ನಿರ್ದೇಶಕ- ಮಾರ್ಕ್ ಹರ್ಮನ್. ಆತನ ಕೈಗೆ ಈ ಕತೆ ಕೊಟ್ಟವನು ಜೋನ್ ಬೋಯ್ನ್ ಎಂಬ ಕತೆಗಾರ. ಎರಡುಸಾವಿರದ ಆರರಲ್ಲಿ ಬಂದ ಈ ಕಾದಂಬರಿ ಎಂಟರಲ್ಲಿ ಸಿನೆಮಾ ಆಗಿ ಹೊರಬಂತು.  ’ The Boy In The Striped Pyjamas’

ಟಿಪ್ಪಣಿ: ನೀವು ಇತಿಹಾಸದ ವಿದ್ಯಾರ್ಥಿಯಾಗಿದ್ದು, ಈ ಸಿನೆಮಾದ ಸುತ್ತ ಸಾಗುವ ಕತೆಯ ಕುರಿತು ಮೊದಲೆ ಅಭ್ಯಸಿಸಿದ್ದರೆ ನೀವು ನೋಡುವ ರೀತಿ ಬೇರಾಗಬಹುದು. ಇಲ್ಲವಾದಲ್ಲಿ, ಚಿತ್ರ ನೋಡಿದ ನಂತರ ನೀವು, ನಾಜಿಗಳು, ಹಿಟ್ಲರ್, ಯೆಹೂದಿಗಳು, ಜೆನೋಸೈಡ್, ಹೋಲೊಕಾಸ್ಟ್.. ಇತ್ಯಾದಿಗಳ ಹಿಂದೆ ಬೀಳುತ್ತೀರಿ. ಇವತ್ತಿಗೆ ಅವುಗಳೆಲ್ಲದರ ಮೂಲ ಹುಡುಕುವುದು ಕಂಪ್ಯೂಟರಿನ ಮುಂದೆ ಕುಳಿತವರಿಗೆ ಕಷ್ಟವಂತೂ ಅಲ್ಲ. ಆದರೆ ಈ ಎಲ್ಲವುಗಳ ನಡುವೆ ಆ ಇಬ್ಬರು ಹುಡುಗರೂ, ಹಾಗೂ ಕೆಲವು ಸನ್ನಿವೇಶಗಳನ್ನು ಮರೆಯುವುದು ಮಾತ್ರ ಖಂಡಿತವಾಗಿಯೂ ಕಷ್ಟವಾಗುತ್ತದೆ.  

ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…

17/11/2009 by Kallare

ಆ ಸಭೆಗೆ ಸಕಲ ಸಿದ್ಧತೆ ನಡೆದಿದೆ. ಬಣ್ಣ ಬಣ್ಣದ ಕರೆಯೋಲೆ ತೆರೆಯಿಂದ ತೆರೆಗೆ ಹರಿದಿದೆ. ತೆರೆಯಿಂದ ಮರೆಗೆ ಸರಿದಿದೆ. ಕರೆಯೋಲೆಯಲ್ಲಿ ಚಿತ್ರ – ಅದಕ್ಕೀಗ ವಿಶೇಷ ಕಳೆ. ಕಣ್ಣಿನಲ್ಲಿ ಕಾಂತಿ. ತುಟಿಯಂಚಿನಲ್ಲಿ ನಗು. ತಿದ್ದಿಟ್ಟ ಕ್ರಾಪು… ಕಿವಿಯಿಂದ ಕಿವಿಗೆ ಮಾತು ತಲುಪಿದೆ. ಈ ಕಿವಿಯಿಂದ ಆ ಕಿವಿಗೆ ದಾಟಿದೆ. ಮಾತಿನಲ್ಲಿ ನೆನಪು – ಅದಕ್ಕೀಗ ವಿಶೇಷ ಕಾಳಜಿ. ವಿಶಿಷ್ಟ ಮಮಕಾರ. ವಿಚಿತ್ರ ಸಂಕಟ.

ಒಂದೊಂದಾಗಿ ಮುಂದುವರಿದು – ಮುಗಿದು ಈಗ ಉದ್ದೇಶಿತ ಕಾರ್ಯಕ್ರ್‍ಅಮ ಆರಂಭವಾಗಬೇಕು. ನೆಲಹಾಸು, ಕುರ್ಚಿಯಿಂದ ಹಿಡಿದು ದೀಪ ಧೂಪದವರೆಗೆ ಎಲ್ಲ ತಂತಮ್ಮ ಸ್ಥಾನ ಅಲಂಕರಿಸಿವೆ. ಬಾಟಲಿಯೊಳಗಿನ ನೀರು, ಅದರ ಪಕ್ಕ ಗ್ಲಾಸು ’ಸ್ವಚ್ಚ’ವಾಗಿ ಸಭೆಯ ನಡುವೆ ತಲುಪಿವೆ. ಎಲ್ಲ ನಿರ್ಜೀವ ವಸ್ತುಗಳೂ ಅಪ್ಪ ಹೇಳಿದ್ದು ಕೇಳುವ ಗಂಭೀರ ಮಕ್ಕಳಂತೆ ಸಪ್ಪೆ ಮೋರೆ ಹೊತ್ತಿವೆ. ಸನ್ಮಾನ್ಯರ ತುಂಬು ನಗೆಯ ಭಾವಚಿತ್ರವೂ ಅತೀ ಮುಖ್ಯ ಸ್ಥಾನ ಅಲಂಕರಿಸಿದೆ. ಅವರೆದುರು ಸುವಾಸನಾಯುಕ್ತ ಊದುಬತ್ತಿಯ ಘಮ. ಅಲ್ಲಲ್ಲಿ ಹರಡಿಕೊಂಡಿರುವ ಸಜೀವ ವಸ್ತುಗಳು ಕಾಲು ಕೆರೆದುಕೊಳ್ಳುತ್ತಲೋ, ತೋಳು ಏರಿಸುತ್ತಲೋ, ಕೂದಲು ತಿದ್ದುತ್ತಲೋ, ಮತ್ತೊಂದರ ಹೆಗಲ ಮೆಲೆ ಕೈಹಾಕುತ್ತಲೋ, ಪೆಕರು ಪೆಕರು ನೋಡುತ್ತಲೋ… ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿವೆ. ಗೇಟೆಂಬ ಪ್ರವೇಶದ್ವಾರದಿಂದ ಮತ್ತಿಷ್ಟು ಅತಿಥಿಗಳು ಬರುತ್ತಿವೆ. ಕಡುಗಪ್ಪು ಅಂಗಿ-ಕೆಂಪು ಗಾಡಿಯೂ, ನೀಲಿಹಾಕಿದ ಬಿಳಿ ಜುಬ್ಬಾ- ಟರ್ಕಿ ಟವೆಲ್ಲುಗಳೂ, ಗಣ್ಯವೂ, ನಗಣ್ಯವೂ ಎಲ್ಲ ನಮೂನೆಗಳಿವೆ. ಅವುಗಳ ಹಿಂದೆ ಮುಂದೆ ವ್ಯಾನಿಟಿ ಬ್ಯಾಗುಗಳೂ, ಹೈಹೀಲ್ಡ್ ಚಪ್ಪಲಿಗಳೂ, ಲಿಪ್’ಸ್ಟಿಕ್ಕುಗಳೂ, ಚಿಕ್ಕ ಚಿಕ್ಕ ಚುರುಕು ಕಣ್ಣುಗಳೂ ಸುತ್ತುತ್ತಿವೆ. ಈವರೆಗೆ ಹರಡಿದ್ದ ಒಂದು ಬಿಗು ವಾತಾವರಣ ತಾನೇ ತಾನಾಗಿ ತಿಳಿಯಾಗುತ್ತಿದೆ. 

ಇನ್ನು ’ನನ್ನದೇನಿಲ್ಲ’ ಎಲ್ಲ ಅವರದೇ ಎಂಬಂತೆ ಒಂದೊಂದಾಗಿ ಎಲ್ಲ ಸಜೀವಿಗಳು ಜಾಗ ಹಿಡಿದಿವೆ. ’ಮೊನ್ನೆ ಮೊನ್ನೆ ನೋಡಿದ್ದೆ, ಎರಡು ದಿನ ಮೊದಲು ನಮ್ಮನೆಗೆ ಬಂದಿದ್ದ, ಭಯಂಕರ ತಲೆ, ಅದ್ಭುತ ಪ್ರತಿಭೆ, ಕಡೆಯ ಊಟದ ಋಣ ನಂಜೊತೆ ಇತ್ತು, ಈಗೀಗ ಸೋತು ಹೋಗಿದ್ದ, ಒಳ್ಳೆ ರಸಿಕ, ಕಳಕೊಳ್ಳುವುದು ಅಂದರೆ ಇದು, ಸರಿ ಸಮಯಕ್ಕೆ ಹೋದ, ಗಟ್ಟಿ ಇರುವಾಗಲೆ ಹೋಗಿಬಿಡಬೇಕು, ಇಲ್ಲಿಗೆ ಎಲ್ಲ ಮುಗೀತು..’ ಎಲ್ಲ ಮುಗಿದು ಎಲ್ಲ ಸಜೀವಿಗಳು ನಿರ್ಜೀವದ ಮೌನಕ್ಕೆ ಹೊಂದಿಕೊಳ್ಳುವ ದಿಶೆಯಲ್ಲಿ ಪ್ರಯತ್ನ ಪ್ರಾರಂಭವಾಗಿದೆ. ಊದುಬತ್ತಿಯ ಪರಿಮಳದ ಮುಂದೆ ಶ್ರೀಯುತರದ್ದು ಮಾತ್ರ ಅದೇ ಮಾಸದ ನಗೆ. ಎದುರಿನಿಂದ ನೋಡುತ್ತಿರುವ ಸಜೀವಿಗಳ ಮುಸುಡಿಯಲ್ಲಿ ಇದ್ದಕ್ಕಿದ್ದಂತೆ ಸತ್ತ ಕಳೆ. ಇದ್ಯಾವುದರ ಪರಿವೆ ಇಲ್ಲದಂತೆ ಮಕ್ಕಳು ಬೆರಳು ಬೆಸೆಯುತ್ತಿವೆ, ನಿರೂಪಕ ಹಾಳೆ ಬದಲಿಸುತ್ತಿದೆ, ಹಲೋ ಮೈಕ್ ಚೆಕ್-ಮೈಕ್ ಚೆಕ್ ನಡೆಯುತ್ತಿದೆ, ಬಿಳಿ ಜುಬ್ಬಾ, ಕೆಂಪು-ಬಿಳಿ-ಕಪ್ಪು ತಲೆ ಸಭೆಯೇರುತ್ತಿದೆ. ಇನ್ನೇನು ಸಭೆ ಆರಂಭ…

ಒಂದು ನಿಮಿಷದ ಮೌನಕ್ಕೆ ಒಂದು ವಾರಕ್ಕೂ ಹೆಚ್ಚಿನ ತಯಾರಿ ನಡೆಸಿದ ಸಜೀವಿಗಳ ಕಣ್ಣು ಏನನ್ನೋ ಹುಡುಕುತ್ತಿದೆ. ಬತ್ತಿ ತುದಿ ದೀಪವಾಗುವ ಮೊದಲೆ ಸೂತ್ರದಾರನ ತಳಮಳ ಹೆಚ್ಚಾಗಿದೆ. ಅತಿಥಿಗಳು ಒಂದರ ಕಿವಿ ಒಂದು ಕಚ್ಚಿಕೊಳ್ಳುತ್ತಿವೆ. ಆಗಲೆ ಮೂರನೆಯ ಬಾರಿ ವಾಚು ನೋಡಿಕೊಂಡವುಗಳ ಸಂಖ್ಯೆ ಇದ್ದವುಗಳ ಅರ್ಧದಷ್ಟಾಗಿದೆ. ಇನ್ನೇನು ಮುಖ್ಯ ಉದ್ದೇಶ ಈಡೇರಬೇಕು – ತೊಡೆ ಬಿರಿದು ಹೊರಬಂದುಬಿಡುತ್ತೇನೆ ಅನ್ನುವಂತೆ ಯಾವನದೋ ಜಂಗಮವಾಣಿ ’ಜಗದಗಲ ಮುಗಿಲಗಲ’ ಕೂಗಿದೆ. ಅಳುವ ಮಗಳನ್ನು ಸಂತೈಸುವ ತಾಯಂತೆ ಎರಡೂ ತೊಡೆಗೆ ಕೈಹಾಕುತ್ತ ಓಡಿದೆ ಆಸಾಮಿ. ದೂರದಲ್ಲಿ, ’ಹಲೋ.. ಒನ್ನಿಮಿಷ ಮೌನಾಚರಣೆ ಮುಗ್ಸಿ ಕಾಲ್ ಮಾಡ್ತೀನಿ. ಎರಡ್ನಿಮಿಷ’ ಕೇಳುತ್ತಿದೆ. 

ಈಗ ಪ್ರಯತ್ನಪೂರ್ವಕವಾಗಿ ಮಾತು, ಸನ್ನೆ, ಶಬ್ಧ ಇತ್ಯಾದಿಗಳಿಗೆ ವಿರಾಮ ಸಿಕ್ಕಿದೆ. ಸಭೆಯ ತುಂಬಾ ನಿಧಾನ ನಿಧಾನವಾಗಿ ತಣ್ಣಗಿನ ಮೌನ ಆವರಿಸಿಕೊಳ್ಳುತ್ತಿದೆ. ಕುರ್ಚಿ ಕಾಲಿನ ಸದ್ದು, ವಯಸ್ಸಿನ ವಾಸನೆ, ಹೆಣ್ಣು ಪರಿಮಳ, ದೂರದ ಗಾಡಿ ಸದ್ದು.. ಎಲ್ಲ ಒಂದೊಂದಾಗಿ ಮರೆಯಾಗುತ್ತಿದೆ. ಕಳ್ಳ ಕಣ್ಣು, ಮಳ್ಳ ಮನಸು ಮಾತ್ರ ಜಿದ್ದಿಗೆ ಬಿದ್ದವರಂತೆ ಬೇಲಿ ಹಾರಿ ಹೊರಟಿವೆ. ಒಂದೊಂದರದ್ದೂ ಒಂದೊಂದು ಕತೆ. ಹಲವು ನೋಟ. ಹಲವಾರು ಕಾಟ. ಸಭೆಯನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುವಂತೆ ನಿರೂಪಕ ಮೌನಕ್ಕೆ ಭಾಷ್ಯ ಬರೆಯಲು ಹೊರಟಿದ್ದಾನೆ – ’… ಈಗ ಒಂದು ನಿಮಿಷದ ಮೌನ’ 

ಅರವತ್ತು ಸೆಕೆಂಡು ಈಗ ಮುಗಿಯಿತಾ, ಈಗ ಮುಗಿಯಿತಾ ಅನ್ನುವ ತಳಮಳದಲ್ಲಿ ಚಡಪಡಿಸಿಬಿಟ್ಟಿವೆ ಒಂದೊಂದೂ ಸಜೀವ ವಸ್ತುಗಳು. ಆ ಒಂದು ನಿಮಿಷದಲ್ಲಿ ಎದುರಿಗಿದ್ದ ಮಾನ್ಯರ ಭಾವಚಿತ್ರ ಅಲ್ಲಲ್ಲಿ ಕೆಲವು ವಿಷಾದಭರಿತ ಕಣ್ಣುಗಳಿಗೆ ಮಾತ್ರ ಕಂಡಿದೆ. ಅವರ ನಗೆ ದೀಪದ ಬೆಳಕಿನಲ್ಲಿ ನಿಚ್ಚಳವಾಗಿ ಕಂಡು ಊದುಬತ್ತಿಯ ಘಮದೊಂದಿಗೆ ನಿಧಾನವಾಗಿ ಪಸರಿಸುತ್ತ ಅನಂತದತ್ತ ವಿಹಾರ ಹೊರಟಿದೆ.    

ಈಗ ಸಭೆಗೆ ಜೀವ ಬರುತ್ತದೆ. ಜೊತೆಗೆ ಮಾನ್ಯ ಅಧ್ಯಕ್ಷರ ನಾಲ್ಕು ಅಮೂಲ್ಯ ಮಾತುಗಳು. ಎದುರಿನಲ್ಲಿ ಪಿಸುಮಾತು. ಮತ್ತೆ ಗದ್ದಲ…ಮುಂದಿನ ತಯಾರಿ. ಆಗಷ್ಟೆ ಹಚ್ಚಿದ ದೀಪ ಆರಿದ್ದು ಗಮನಿಸುವ ಅವಶ್ಯಕತೆಯೇನಿದೆ?  ಮತ್ತೊಂದು ಮೌನಾಚರಣೆ ಬರುವವರೆಗೆ ಬರೀ ಮಾತು. ಬರೀ ಕತೆ. ಭಾಷಣ, ಬರಹ, ಹಾರ-ತುರಾಯಿ, ಸನ್ಮಾನ, ಸಮಾರಂಭ. ಮತ್ತೊಂದು ಇನ್ನೊಂದು. ವರ್ತಮಾನದಲ್ಲೆನಿದ್ದರೂ ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…    

ಕೊನೆಯ ಮಾತು: ಇವು ಶೃದ್ಧಾಂಜಲಿ ಕಾರ್ಯಕ್ರಮಕ್ಕೂ ಮೊದಲು ಸುಮ್ಮನೆ ಬರೆದಿಟ್ಟ ಸಾಲುಗಳು. ’ಬೊಗಸೆಯಲ್ಲಿ ಮಳೆ’ಯ  ಅಂಕಣವೊಂದರ ನೆನಪಿನಲ್ಲಿ.

ಯಕ್ಷಗಾನದ ’ಮಹಾಬಲ’ರಿಗೊಂದು ಶೃದ್ಧಾಂಜಲಿ

11/11/2009 by Kallare

ಕೌರವ, ಭೀಷ್ಮ, ಕೀಚಕ, ವಿಶ್ವಾಮಿತ್ರ… ಪ್ರತಿಯೊಬ್ಬ ಪುರಾಣ ಪುರುಷನ ರಂಗದ ಅಸ್ತಿತ್ವಕ್ಕೆ ಮತ್ತೊಮ್ಮೆ ಅಲ್ಪವಿರಾಮ ಬಿದ್ದಿದೆ. ನಿರಂತರವಾಗಿ ಅಭ್ಯಸಿಸಿ, ಪರದೆಯ ಮುಂದೆ ತಂದು, ಆಯಾ ಪಾತ್ರಕ್ಕೆ ತಕ್ಕ ಗೌರವ ಸಲ್ಲಿಸಿ, ’ನಾನು ನನ್ನಂತೆಯೆ, ಬೇರೆ ಯಾರಂತೆಯೂ ಅಲ್ಲ’ ಅನ್ನುವ ವಿಶ್ವಾಸದಲ್ಲಿ ಅವರು ಇಟ್ಟ ಒಂದೊಂದು ಹೆಜ್ಜೆಯೂ ’ಮಹಾಬಲ’ ಹೆಜ್ಜೆಯಾಯಿತು. ಕ್ಷೇತ್ರ ವಿಸ್ತಾರವಾಯಿತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಹೋಗಿದ್ದಾರೆ. ಬಹುಶ: ಅಲ್ಲೀಗ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರಬಹುದು. 

ಇಲ್ಲೀಗ ಅವರ ನೆನಪು. ಅವರ ವಿಚಾರ. ಬರಹ, ಭಾಷಣ, ಚರ್ಚೆ, ಅರ್ಥ… ಮತ್ತೊಂದು.  ಎಲ್ಲ ವರ್ತನಮಾನ. ಬರುವ ಶನಿವಾರ ಅವರಿಗೊಂದು ಶೃದ್ಧಾಂಜಲಿ. ಒಂದು ತಾಳಮದ್ದಲೆ.

Mahabala

ನೀವು ಬನ್ನಿ

‘304′ ಬುದ್ಧಿವಂತರಿಗೆ ಮಾತ್ರ!

27/10/2009 by Kallare

ಊರಂದ್ರೆ ಊರಪಾ. ಅದೆಂಥಾ ಮಳೆ ಅಲ್ಲಿ? ಅಬ್ಬರ ಅಬ್ಬರ! ಸಂಜೆ ಮನೆಲಿ ಕೂತ್ರೆ ಅದೆಂಥಾ ಮಾತು-ಕತೆ. ಮಾತೇ ಬಂಗಾರ ಅಲ್ಲಿ. ಬಿಸ್ಸಿಬಿಸಿ ಚಾ, ಕರಿದ ಹಪ್ಪಳ ಮತ್ತೊಂದು ಇನ್ನೊಂದು ತಿಂತಾ ಕೂತ್ರೆ ಅಹಾ.. ಊರೇ ಊರು. ಬೇಕಾದ್ದು ಬೇಕಾದಾಂಗೆ. ಬೇಕಿಲ್ಲದ್ದು ಬೇಕಿಲ್ಲದಾಂಗೆ. ವೀಕೆಂಡು ಮತ್ತೊಂದು ಅಲ್ಲಿಗೆ ಬರಲಾರದು. ಅದೆಲ್ಲ ಬರೀ ಮಳ್ಳು, ನೀವೇ ನೋಡಿ – ವಾರದ ಕೊನೆಯ ಎರಡು ದಿನ ತೆಗೆದು ಅದನ್ನ ನಿಮ್ದೇ ಊರಿನ ವಾರಾಂತ್ಯದ ಜೊತೆ ಹೋಲಿಸಿ ನೋಡಿ. ಪಕ್ಕಾ ಗೊತ್ತಗುತ್ತೆ…

ವರ್ಷಗಳಿಂದ ಬೆಂಗಳೂರಲ್ಲಿರುವ ’ಅಣ್ಣ’ (ಒಂಥರಾ ಅಣ್ಣಾವ್ರು ಇದ್ದಾಂಗೆ ಈ ಜನ) ಹಿಂದಿನ ತಿಂಗಳು ಶಿವಮೊಗ್ಗೆಗೆ ಹೋಗಿ ಅಲ್ಲಿಂದ ಘಟ್ಟ ಇಳಿದು, ಫೋಟೊ ಹೊಡೆದು, ಶರಾವತಿಯ ನೀರು ಕುಡಿದು, ಹೊನ್ನಾವರಕ್ಕೆ ಹೋಗಿ ಉಳಿದು, ಆ ವಾರದಲ್ಲಿ ಅಪ್ಸರಕೊಂಡದಲ್ಲಿ ಮೂರು ಸಂಜೆ ಕಳೆದು, ರಾಮತೀರ್ಥದ ಗುಡ್ಡೆ ಹತ್ತಿ ಕತ್ತಲ ಕರೆದು, ರಾತ್ರಿ ಪೂರ್ತಿ ಜಾಗರಣೆ ಮಾಡಿ ವಾರ ಮುಗಿಸಿ… ಅಲ್ಲಿಂದ ಗೆರುಸೊಪ್ಪೆ ಘಟ್ಟ ಹತ್ತಿ ಮಾಯನಗುಂಡಿಯಲ್ಲಿ (ಮಾವಿನಗುಂಡಿ) ಒಂದರ್ಧ ಗಂಟೆ ನಿಂತು ಎರಡರಲ್ಲಿ ಮೂರು ಚಾ ಆರ್ಡರ್ ಮಾಡಿ, ’ಇದೆಂತಾ ನೆಗಸನ ನೀರು’ ಅಂದು ಹತ್ತು ರೂಪಾಯಿ ಕೊಟ್ಟು ಅಂಗಡಿಯವನ ಮುಂದೇ ಚಾ ಚೆಲ್ಲಿ, ಊರಲ್ಲಿ ರೂಢಿಮಾಡಿಕೊಂಡು ಬಂದ ’ತಥ್ಥೆರಿಕಿ’ ಎರಡೆರಡು ಬಾರಿ ಹೇಳಿ, ಭುಂ ಅಂತ ಬೆಂಗಳೂರಿಗೆ ಬಂದು, ಅರೆತಲೆ ನೋವು ಅನ್ನುತ್ತ ಅಮೃತಾಂಜನ ಹಚ್ಚಿಕೊಂಡು ಬೋಳು ತಿಕ್ಕುತ್ತಾ…. ನಮ್ಮನ್ನು ಕರೆದು ಅಂದದ್ದು. ’ಒಂದು ಕೆಲ್ಸ ಮಾಡಿ..’

ಬೆಂಗಳೂರು ಸಧ್ಯಕ್ಕೆ ಜಾಗ ಕೊಟ್ಟ ಊರು, ಹೊನ್ನಾವರ ಮೂಲ ಊರು ಅನ್ನುತ್ತ ಊರಿನ ಆಯ್ಕೆ ಮಾಡಿದ್ದಾಯ್ತು. ಈಗ ಮುಂದೇನು? ಅನ್ನುವ ವಿಷಯ ಬಂತು. ಅಣ್ಣನ ಪ್ರಶ್ನೆ ಮುಂದುವರೆಯಿತು… ಬೆಂಗಳೂರಲ್ಲಿದ್ದು ವಾರದ ಕೊನೆಯ ಎರಡು ದಿನ ಏನ್ ಮಾಡ್ತೀರಿ? ಮಾಡಬಹುದು? ಊರಲ್ಲಿದ್ದವರು ಏನು ಮಾಡ್ತಾರೆ? ಮಾಡಬಹುದು? ಅಥವಾ ನೀವೆ ಅಲ್ಲಿ ಇದ್ದಿದ್ರೆ ಏನು ಮಾಡ್ತಿದ್ರಿ? ಪಟ್ಟಿ ಮಾಡಿ.

ಕೆಲಸ ಪ್ರಾರಂಭವಾಗುವ ಮೊದಲೇ ನಮ್ಮ ಬೆಂದಕಾಳೂರಿನ ಹುಡುಗ ಮೂಲ ಊರು ಸಿಗದೆ ಒದ್ದಾಡುತ್ತಿದ್ದ. ಅವ, ಅವನಪ್ಪ ಹುಟ್ಟಿದ್ದು ಬೆಂಗಳೂರಲ್ಲಂತೆ. ಅದಕ್ಕೂ ಮೊದಲಿನ ಊರು ಈಗ ಸಂಪರ್ಕದಲ್ಲಿಲ್ಲವಾದ್ದರಿಂದ, ಹುಟ್ಟಿದಾಗಿಂದ ಆ ಊರನ್ನು ನೋಡದೆ ಇರುವುದರಿಂದ, ಆಯ್ಕೆಮಾಡಲು ಮತ್ತೊಂದು ಊರು ಇಲ್ಲದಿರುವುದರಿಂದ ಆತನ ಮೂಲ ಊರೇ ಬೆಂಗಳೂರು ಹಾಗೂ ಬೆಂಗಳೂರಿನವರು ಈ ಪ್ರಶ್ನೆಗೆ ಉತ್ತರಿಸುವ ಅಗತ್ಯ ಇಲ್ಲ ಅನ್ನುವ ತೀರ್ಮಾನವನ್ನು ನಮ್ಮ ’ಅಣ್ಣ’ ನಿಮಿಷದೊಳಗೆ ಬಿಸಾಕಿದ. ಅಲ್ಲಿಗೆ ನಮ್ಮ ಬೆಂಗಳೂರು ಹುಡುಗ ಪ್ರಶ್ನೆಯ ವ್ಯಾಪ್ತಿಯಿಂದ ಹೊರಗೆ. ಒಂದು ವಿಷಯ ತಿಳಿಸಲೇ ಬೇಕು – ನಮ್ಮ ಅಲಿಖಿತ ನಿಯಮದಂತೆ ಬೆಂಗಳೂರನ್ನು ’ಸ್ವಂತಊರು’, ’ಮೂಲಊರು’ ಅನ್ನುವಂತಿಲ್ಲ. ಮೂಲತ: ಬೆಂಗಳೂರಿಗರಿಗೂ ಇವತ್ತಿಗೆ ಸ್ವಂತ ಊರಾಗಿ ಉಳಿದಿಲ್ಲವಾದ್ದರಿಂದ ಅವರೆಡೆಗೆ ಅನುಕಂಪ ತೋರಿಸಬೇಕು. ಹೆಚ್ಚೆಂದರೆ ಬಾಡಿಗೆ ವಸೂಲಿ ಮಾಡಿಕೊಂಡಿರುವವರಿಗೆ ಬದುಕಿಕೊ ಬಡಜೀವವೆ ಎಂದು ಸರಿಯಾದ ಸಮಯಕ್ಕೆ ದುಡ್ಡು ತಲುಪಿಸಬೇಕು….

ಹೀಗೆ. ಪಟ್ಟಿ ಶುರುವಾಗುವ ಮೊದಲು ಬೆಂಗಳೂರಿನ ವಾರಾಂತ್ಯದ ಹಾಗೂ ಮೂಲ ಊರಿನ ವಾರದ ಎಲ್ಲಾ ದಿನಗಳ ಸಾಧ್ಯತೆಯ ಪಟ್ಟಿ ಮಾಡುವುದು ಅನ್ನುವ ಚಿಕ್ಕ ಬದಲಾವಣೆಯಾಗಿ ಕಿರಾಣಿ ಸಾಮಾನಿನ ಪಟ್ಟಿಯಂತೆ ಶುರುವಾದ ಕೆಲಸ ಬೆಳೆದು ಬೆಳೆದು ಯಡ್ಡಿಯ ಬಜೆಟ್ಟಿಗಿಂತ ದೊಡ್ಡದಾಗುತ್ತಿರುವ ಎಲ್ಲಾ ಲಕ್ಷಣಗಳೂ ಕಂಡು ಬಂತು. ಹಾಗೆ ಬೆಳೆಯುತ್ತ ಹೋದ ಪಟ್ಟಿ ಒಂದು ಹಂತಕ್ಕೆ ಬಂದು ವಿಷಯಾಂತರವಾದದ್ದು ’304’ರಿಂದಾಗಿ. ಆ ಹೆಸರು ಕೇಳುತ್ತಲೆ ನಮ್ಮ ’ಅಣ್ಣ’ನ ಕಿವಿಯ ಬಿಳಿ ಕೂದಲೂ ಸಹ ನೆಟ್ಟಗಾಗಿ, ಅವನೊಳಗೆ (ನಮ್ಮೊಳಗೂ..)ಒಂದು ನಮೂನಿಯ ರೋಮಾಂಚನಾವಾಗಿ… ಕರ್ರಗೆ ಮಿಂಚುವ ಬಾಕ್ಸಿನೊಳಗಿನ ಐವತ್ತೆರಡು ಹಾಳೆಗಳ ನಡುವಿಂದ ’ಎಕ್ಕ, ರಾಜ, ರಾಣಿ, ಗುಲಾಮ.. ಎಲ್ಲ ಹೊರಬಿದ್ದವು’. ಗುಲಾಮನ ಹಿಂದೆ ಹತ್ತು, ಒಂಬತ್ತು, ಎಂಟು… ಜರ್ಮನಿಯ ತುದಿಯಿಂದ ಹಾಳೆಗಳ ನಡುವೆ ತೂರಿಕೊಂಡು ಬಂದ ’ಜೋಕರ’ ನಮ್ಮನ್ನೆಲ್ಲ ನೋಡಿ ಭರ್ತಿ ನಗಲಾರಂಭಿಸಿದ. ಅಣ್ಣಂಗೆ ಆಟದ ಮಧ್ಯೆ ಯಾರೂ ನಗುವಂತಿಲ್ಲ. ಜೋಕರ್ ಜೋಡಿಯನ್ನು ಹೆಕ್ಕಿ ಬಾಕ್ಸಿನಲ್ಲಿ ಬಂಧಿಸಿಟ್ಟ. ಆರರಿಂದ ಮುಂದಿನ ಎಲ್ಲಾ ಕಾರ್ಡುಗಳು ಒಂದೆಡೆ, ಅದಕ್ಕೂ ಮೊದಲಿನ ಕಾರ್ಡುಗಳು ಕೆಂಪು ಕಪ್ಪು ಆಗಿ ಇನ್ನೊಂದೆಡೆ ಜಾಗ ಪಡೆದವು. ಮೂರು ತಾಸಿಗೆ ಬೇಕಾದ ಎಲ್ಲ ವ್ಯವಸ್ಥೆಯೂ ಆಯಿತು. ಒಂದೇ ಒಂದು ಫೋನು, ಒಂದು ಎಸ್ಸೆಮ್ಮೆಸ್ಸು – ಘಟಾನುಘಟಿಗಳ ಆಗಮನವಾಯಿತು. ಆರು ಜನರ ದುಂಡು ಮೇಜಿನ ಪರಿಷತ್ತು ಯಾವ ಮೂರು ಜನ ಒಂದೊಂದು ಪಾರ್ಟಿ ಅನ್ನುವ ತೀರ್ಮಾನಕ್ಕೆ ಬಂದು Toss ಆಗಿ ಆಟ ಪ್ರಾರಂಭವಾಯಿತು. –  ’304’

 ಇಸ್ಪೀಟು ಅಂದ್ರೆ ಬರೀ – ಇಸ್ಪೀಟು (Spades), ಆಟೀನು (Hearts), ಚೌಕಟಿ (Diamonds), ಕಳಾವರ (Clubs) ಅಲ್ಲ. ಆಟ ಅಂದ್ರೆ ಬರೀ ಕತ್ತೆ, ಸೊಗ್ಗತ್ತೆ, ರಮ್ಮಿ… ಅಲ್ಲ. ಇಸ್ಪೀಟು ಅಂದ್ರೆ ಕ್ಲಬ್ಬಿಗೆ ಹೋಗಿ ಇಲ್ಲಾ ಇದ್ದಲ್ಲೇ ಒಂದು ಕ್ಲಬ್ಬು ಮಾಡಿಕೊಂಡು ದುಡ್ಡು ಕಳೆಯುವುದಲ್ಲ. ಚಟ ಮಾಡುವುದಲ್ಲ. ಇಸ್ಪೀಟು ಅಂದ್ರೆ ಕಾಲಹರಣ ಅಲ್ಲ. ಇಸ್ಪೀಟು ಅಂದ್ರೆ ತಮಾಷೆಯಲ್ಲ.

ಇಸ್ಪೀಟು ಅಂದ್ರೆ – ‘304′. ಅಣ್ಣನ ಮಾತು ಇದು.

ಚುರುಕು ತಲೆಯವರು ಮಾತ್ರ ಆಡಬಹುದಾದ ಆಟ. ಲೆಕ್ಕ ಬರುವವರು ಮಾತ್ರ ಆಡಬಹುದಾದ ಆಟ. ಲೆಕ್ಕ ತಪ್ಪಿದರೆ ಮುಜುಗರಕ್ಕೀಡುಮಾಡುವ ಆಟ… ಹೀಗೆ ಈ ಆಟದ ಗುಣಗಾನ ಮಾಡ್ತಾರೆ ನಮ್ಮ ಅಣ್ಣಾವ್ರು. ಊರಲ್ಲಿ ವಾರಗಟ್ಲೆ ಆಡಿ ಬಂದವ್ರು ಹದಿನೈದು ದಿನ ಆದ್ರೂ ಅದರ ಸುದ್ದಿ ಮಾತ್ರ ಬಿಟ್ಟಿಲ್ಲ. ವಿಜಯೋತ್ಸವದ್ದು ದೊಡ್ಡ ಸುದ್ದಿ. ಸೋತಲ್ಲೆಲ್ಲ ವಿಮರ್ಷೆ. ಕಾರಣ ಹುಡುಕುವಿಕೆ. ಬರೀ ಅದೇ ಸುದ್ದಿ.

ನಿಜ, ಇಸ್ಪೀಟು ಒಮ್ಮೆ ತಮಾಷೆ, ಮತ್ತೊಮ್ಮೆ ಗಂಭೀರ. ಒಮ್ಮೊಮ್ಮೆ ಮಾತು, ಒಮ್ಮೊಮ್ಮೆ ಮೌನ. ಇಸ್ಪೀಟು ರಾಗ, ವಿರಾಗ, ನೆನಪು, ಮರೆವು, ಸಂತೋಷ, ದು:ಖ, ಸಮಾನತೆ, ಅಸಮಾನತೆ, ರೂಪ, ವಿರೂಪ.. ಇಸ್ಪೀಟು ಎಲ್ಲ. ಇಸ್ಪೀಟು ಏನೂ ಅಲ್ಲ.

ಅಷ್ಟೇ ಅಲ್ಲ, ಒಮ್ಮೊಮ್ಮೆ ಇಸ್ಪೀಟು ಚಟ. ಇಸ್ಪೀಟು ಚಟ್ಟ.

ಅಣ್ಣ ಅಪರೂಪಕ್ಕೊಮ್ಮೆ ಆಡ್ತಾನೆ. ಆಟ ಅಂದ್ರೆ ‘304′, ಅಷ್ಟೆ. ಬಾಕಿ ಎಲ್ಲಾ ಬರಿ ಓಳು! ಅಂತಾನೆ. ಆಡುವವರು ಗಂಡು ಆಟ ಆಡಿ, ಬುದ್ದಿಯಿರುವವರಿಗಾಗಿ ಮಾತ್ರ ಇರುವ ಇದೊಂದೆ ಆಟ ಆಡಿ ಅಂದಿದಾನೆ. ಅದೂ ಆಗಾಗ, ಕೆಲವು ಹೊತ್ತು ಮಾತ್ರ.

ಆಡ್ಬೇಕು ಅಂತಿದ್ರೆ, ಲೆಕ್ಕಾಚಾರದ ಹಿಂದೆ ಬೀಳ್ಬೇಕು ಅಂತಿದ್ರೆ ಅಣ್ಣನ ಸಂಪರ್ಕ ಮಾಡಬಹುದು. ಆತ ಮನಸು ಮಾಡಿದರೆ ಉಚಿತ ತರಬೇತಿ. ಇಲ್ಲದಿದ್ದರೆ ಇಲ್ಲ. ಆತ ಇಲ್ಲಿಗೆ ಬಂದು ಆಟವನ್ನು ವಿವರಿಸಲೂಬಹುದು. ಇಲ್ಲ ಅಣ್ಣನನ್ನು ಸಂಪರ್ಕಿಸಬಹುದು – ’ispeetaata@gmail.com’

ಅಣ್ಣನ ಸೂಚನೆ: ಇಸ್ಪೀಟು ಆಡಿಬಿಡಿ. ಆಡಿ. ಬಿಡಿ. 304 ಕಲಿತುಬಿಡಿ. ಕಲಿತು ಬಿಡಿ. ಆದ್ರೆ ಯಾವ್ದನ್ನೂ ಚಟ ಮಾಡ್ಬೇಡಿ. ಅದೆಲ್ಲ ನಮ್ದಲ್ಲ ಅನ್ನೋರು ವಾರಾಂತ್ಯದ ಎರಡು ದಿನ ನಿಮ್ಮ ಮೂಲ ಊರಲ್ಲಿ ಏನು ಮಾಡ್ತಾರೆ, ನೀವಿರುವ ಊರಲ್ಲಿ ಏನು ಮಾಡ್ತಾರೆ ಅಂತ ಒಂದು ಪಟ್ಟಿ ಮಾಡಿ. ನಂಗೆ ಕಳ್ಸಿ.

ವಿ ಸೂಚನೆ: ಈ ಅಣ್ಣನಿಗೂ ಮಲ್ಲೇಶ್ವರ ಮಿತ್ರಮಂಡಳಿಯ ಅಣ್ಣನಿಗೂ ಯಾವುದೇ ಸಂಬಂಧ ಇಲ್ಲಾ..