ಊರಂದ್ರೆ ಊರಪಾ. ಅದೆಂಥಾ ಮಳೆ ಅಲ್ಲಿ? ಅಬ್ಬರ ಅಬ್ಬರ! ಸಂಜೆ ಮನೆಲಿ ಕೂತ್ರೆ ಅದೆಂಥಾ ಮಾತು-ಕತೆ. ಮಾತೇ ಬಂಗಾರ ಅಲ್ಲಿ. ಬಿಸ್ಸಿಬಿಸಿ ಚಾ, ಕರಿದ ಹಪ್ಪಳ ಮತ್ತೊಂದು ಇನ್ನೊಂದು ತಿಂತಾ ಕೂತ್ರೆ ಅಹಾ.. ಊರೇ ಊರು. ಬೇಕಾದ್ದು ಬೇಕಾದಾಂಗೆ. ಬೇಕಿಲ್ಲದ್ದು ಬೇಕಿಲ್ಲದಾಂಗೆ. ವೀಕೆಂಡು ಮತ್ತೊಂದು ಅಲ್ಲಿಗೆ ಬರಲಾರದು. ಅದೆಲ್ಲ ಬರೀ ಮಳ್ಳು, ನೀವೇ ನೋಡಿ – ವಾರದ ಕೊನೆಯ ಎರಡು ದಿನ ತೆಗೆದು ಅದನ್ನ ನಿಮ್ದೇ ಊರಿನ ವಾರಾಂತ್ಯದ ಜೊತೆ ಹೋಲಿಸಿ ನೋಡಿ. ಪಕ್ಕಾ ಗೊತ್ತಗುತ್ತೆ…
ವರ್ಷಗಳಿಂದ ಬೆಂಗಳೂರಲ್ಲಿರುವ ’ಅಣ್ಣ’ (ಒಂಥರಾ ಅಣ್ಣಾವ್ರು ಇದ್ದಾಂಗೆ ಈ ಜನ) ಹಿಂದಿನ ತಿಂಗಳು ಶಿವಮೊಗ್ಗೆಗೆ ಹೋಗಿ ಅಲ್ಲಿಂದ ಘಟ್ಟ ಇಳಿದು, ಫೋಟೊ ಹೊಡೆದು, ಶರಾವತಿಯ ನೀರು ಕುಡಿದು, ಹೊನ್ನಾವರಕ್ಕೆ ಹೋಗಿ ಉಳಿದು, ಆ ವಾರದಲ್ಲಿ ಅಪ್ಸರಕೊಂಡದಲ್ಲಿ ಮೂರು ಸಂಜೆ ಕಳೆದು, ರಾಮತೀರ್ಥದ ಗುಡ್ಡೆ ಹತ್ತಿ ಕತ್ತಲ ಕರೆದು, ರಾತ್ರಿ ಪೂರ್ತಿ ಜಾಗರಣೆ ಮಾಡಿ ವಾರ ಮುಗಿಸಿ… ಅಲ್ಲಿಂದ ಗೆರುಸೊಪ್ಪೆ ಘಟ್ಟ ಹತ್ತಿ ಮಾಯನಗುಂಡಿಯಲ್ಲಿ (ಮಾವಿನಗುಂಡಿ) ಒಂದರ್ಧ ಗಂಟೆ ನಿಂತು ಎರಡರಲ್ಲಿ ಮೂರು ಚಾ ಆರ್ಡರ್ ಮಾಡಿ, ’ಇದೆಂತಾ ನೆಗಸನ ನೀರು’ ಅಂದು ಹತ್ತು ರೂಪಾಯಿ ಕೊಟ್ಟು ಅಂಗಡಿಯವನ ಮುಂದೇ ಚಾ ಚೆಲ್ಲಿ, ಊರಲ್ಲಿ ರೂಢಿಮಾಡಿಕೊಂಡು ಬಂದ ’ತಥ್ಥೆರಿಕಿ’ ಎರಡೆರಡು ಬಾರಿ ಹೇಳಿ, ಭುಂ ಅಂತ ಬೆಂಗಳೂರಿಗೆ ಬಂದು, ಅರೆತಲೆ ನೋವು ಅನ್ನುತ್ತ ಅಮೃತಾಂಜನ ಹಚ್ಚಿಕೊಂಡು ಬೋಳು ತಿಕ್ಕುತ್ತಾ…. ನಮ್ಮನ್ನು ಕರೆದು ಅಂದದ್ದು. ’ಒಂದು ಕೆಲ್ಸ ಮಾಡಿ..’
ಬೆಂಗಳೂರು ಸಧ್ಯಕ್ಕೆ ಜಾಗ ಕೊಟ್ಟ ಊರು, ಹೊನ್ನಾವರ ಮೂಲ ಊರು ಅನ್ನುತ್ತ ಊರಿನ ಆಯ್ಕೆ ಮಾಡಿದ್ದಾಯ್ತು. ಈಗ ಮುಂದೇನು? ಅನ್ನುವ ವಿಷಯ ಬಂತು. ಅಣ್ಣನ ಪ್ರಶ್ನೆ ಮುಂದುವರೆಯಿತು… ಬೆಂಗಳೂರಲ್ಲಿದ್ದು ವಾರದ ಕೊನೆಯ ಎರಡು ದಿನ ಏನ್ ಮಾಡ್ತೀರಿ? ಮಾಡಬಹುದು? ಊರಲ್ಲಿದ್ದವರು ಏನು ಮಾಡ್ತಾರೆ? ಮಾಡಬಹುದು? ಅಥವಾ ನೀವೆ ಅಲ್ಲಿ ಇದ್ದಿದ್ರೆ ಏನು ಮಾಡ್ತಿದ್ರಿ? ಪಟ್ಟಿ ಮಾಡಿ.
ಕೆಲಸ ಪ್ರಾರಂಭವಾಗುವ ಮೊದಲೇ ನಮ್ಮ ಬೆಂದಕಾಳೂರಿನ ಹುಡುಗ ಮೂಲ ಊರು ಸಿಗದೆ ಒದ್ದಾಡುತ್ತಿದ್ದ. ಅವ, ಅವನಪ್ಪ ಹುಟ್ಟಿದ್ದು ಬೆಂಗಳೂರಲ್ಲಂತೆ. ಅದಕ್ಕೂ ಮೊದಲಿನ ಊರು ಈಗ ಸಂಪರ್ಕದಲ್ಲಿಲ್ಲವಾದ್ದರಿಂದ, ಹುಟ್ಟಿದಾಗಿಂದ ಆ ಊರನ್ನು ನೋಡದೆ ಇರುವುದರಿಂದ, ಆಯ್ಕೆಮಾಡಲು ಮತ್ತೊಂದು ಊರು ಇಲ್ಲದಿರುವುದರಿಂದ ಆತನ ಮೂಲ ಊರೇ ಬೆಂಗಳೂರು ಹಾಗೂ ಬೆಂಗಳೂರಿನವರು ಈ ಪ್ರಶ್ನೆಗೆ ಉತ್ತರಿಸುವ ಅಗತ್ಯ ಇಲ್ಲ ಅನ್ನುವ ತೀರ್ಮಾನವನ್ನು ನಮ್ಮ ’ಅಣ್ಣ’ ನಿಮಿಷದೊಳಗೆ ಬಿಸಾಕಿದ. ಅಲ್ಲಿಗೆ ನಮ್ಮ ಬೆಂಗಳೂರು ಹುಡುಗ ಪ್ರಶ್ನೆಯ ವ್ಯಾಪ್ತಿಯಿಂದ ಹೊರಗೆ. ಒಂದು ವಿಷಯ ತಿಳಿಸಲೇ ಬೇಕು – ನಮ್ಮ ಅಲಿಖಿತ ನಿಯಮದಂತೆ ಬೆಂಗಳೂರನ್ನು ’ಸ್ವಂತಊರು’, ’ಮೂಲಊರು’ ಅನ್ನುವಂತಿಲ್ಲ. ಮೂಲತ: ಬೆಂಗಳೂರಿಗರಿಗೂ ಇವತ್ತಿಗೆ ಸ್ವಂತ ಊರಾಗಿ ಉಳಿದಿಲ್ಲವಾದ್ದರಿಂದ ಅವರೆಡೆಗೆ ಅನುಕಂಪ ತೋರಿಸಬೇಕು. ಹೆಚ್ಚೆಂದರೆ ಬಾಡಿಗೆ ವಸೂಲಿ ಮಾಡಿಕೊಂಡಿರುವವರಿಗೆ ಬದುಕಿಕೊ ಬಡಜೀವವೆ ಎಂದು ಸರಿಯಾದ ಸಮಯಕ್ಕೆ ದುಡ್ಡು ತಲುಪಿಸಬೇಕು….
ಹೀಗೆ. ಪಟ್ಟಿ ಶುರುವಾಗುವ ಮೊದಲು ಬೆಂಗಳೂರಿನ ವಾರಾಂತ್ಯದ ಹಾಗೂ ಮೂಲ ಊರಿನ ವಾರದ ಎಲ್ಲಾ ದಿನಗಳ ಸಾಧ್ಯತೆಯ ಪಟ್ಟಿ ಮಾಡುವುದು ಅನ್ನುವ ಚಿಕ್ಕ ಬದಲಾವಣೆಯಾಗಿ ಕಿರಾಣಿ ಸಾಮಾನಿನ ಪಟ್ಟಿಯಂತೆ ಶುರುವಾದ ಕೆಲಸ ಬೆಳೆದು ಬೆಳೆದು ಯಡ್ಡಿಯ ಬಜೆಟ್ಟಿಗಿಂತ ದೊಡ್ಡದಾಗುತ್ತಿರುವ ಎಲ್ಲಾ ಲಕ್ಷಣಗಳೂ ಕಂಡು ಬಂತು. ಹಾಗೆ ಬೆಳೆಯುತ್ತ ಹೋದ ಪಟ್ಟಿ ಒಂದು ಹಂತಕ್ಕೆ ಬಂದು ವಿಷಯಾಂತರವಾದದ್ದು ’304’ರಿಂದಾಗಿ. ಆ ಹೆಸರು ಕೇಳುತ್ತಲೆ ನಮ್ಮ ’ಅಣ್ಣ’ನ ಕಿವಿಯ ಬಿಳಿ ಕೂದಲೂ ಸಹ ನೆಟ್ಟಗಾಗಿ, ಅವನೊಳಗೆ (ನಮ್ಮೊಳಗೂ..)ಒಂದು ನಮೂನಿಯ ರೋಮಾಂಚನಾವಾಗಿ… ಕರ್ರಗೆ ಮಿಂಚುವ ಬಾಕ್ಸಿನೊಳಗಿನ ಐವತ್ತೆರಡು ಹಾಳೆಗಳ ನಡುವಿಂದ ’ಎಕ್ಕ, ರಾಜ, ರಾಣಿ, ಗುಲಾಮ.. ಎಲ್ಲ ಹೊರಬಿದ್ದವು’. ಗುಲಾಮನ ಹಿಂದೆ ಹತ್ತು, ಒಂಬತ್ತು, ಎಂಟು… ಜರ್ಮನಿಯ ತುದಿಯಿಂದ ಹಾಳೆಗಳ ನಡುವೆ ತೂರಿಕೊಂಡು ಬಂದ ’ಜೋಕರ’ ನಮ್ಮನ್ನೆಲ್ಲ ನೋಡಿ ಭರ್ತಿ ನಗಲಾರಂಭಿಸಿದ. ಅಣ್ಣಂಗೆ ಆಟದ ಮಧ್ಯೆ ಯಾರೂ ನಗುವಂತಿಲ್ಲ. ಜೋಕರ್ ಜೋಡಿಯನ್ನು ಹೆಕ್ಕಿ ಬಾಕ್ಸಿನಲ್ಲಿ ಬಂಧಿಸಿಟ್ಟ. ಆರರಿಂದ ಮುಂದಿನ ಎಲ್ಲಾ ಕಾರ್ಡುಗಳು ಒಂದೆಡೆ, ಅದಕ್ಕೂ ಮೊದಲಿನ ಕಾರ್ಡುಗಳು ಕೆಂಪು ಕಪ್ಪು ಆಗಿ ಇನ್ನೊಂದೆಡೆ ಜಾಗ ಪಡೆದವು. ಮೂರು ತಾಸಿಗೆ ಬೇಕಾದ ಎಲ್ಲ ವ್ಯವಸ್ಥೆಯೂ ಆಯಿತು. ಒಂದೇ ಒಂದು ಫೋನು, ಒಂದು ಎಸ್ಸೆಮ್ಮೆಸ್ಸು – ಘಟಾನುಘಟಿಗಳ ಆಗಮನವಾಯಿತು. ಆರು ಜನರ ದುಂಡು ಮೇಜಿನ ಪರಿಷತ್ತು ಯಾವ ಮೂರು ಜನ ಒಂದೊಂದು ಪಾರ್ಟಿ ಅನ್ನುವ ತೀರ್ಮಾನಕ್ಕೆ ಬಂದು Toss ಆಗಿ ಆಟ ಪ್ರಾರಂಭವಾಯಿತು. – ’304’
ಇಸ್ಪೀಟು ಅಂದ್ರೆ ಬರೀ – ಇಸ್ಪೀಟು (Spades), ಆಟೀನು (Hearts), ಚೌಕಟಿ (Diamonds), ಕಳಾವರ (Clubs) ಅಲ್ಲ. ಆಟ ಅಂದ್ರೆ ಬರೀ ಕತ್ತೆ, ಸೊಗ್ಗತ್ತೆ, ರಮ್ಮಿ… ಅಲ್ಲ. ಇಸ್ಪೀಟು ಅಂದ್ರೆ ಕ್ಲಬ್ಬಿಗೆ ಹೋಗಿ ಇಲ್ಲಾ ಇದ್ದಲ್ಲೇ ಒಂದು ಕ್ಲಬ್ಬು ಮಾಡಿಕೊಂಡು ದುಡ್ಡು ಕಳೆಯುವುದಲ್ಲ. ಚಟ ಮಾಡುವುದಲ್ಲ. ಇಸ್ಪೀಟು ಅಂದ್ರೆ ಕಾಲಹರಣ ಅಲ್ಲ. ಇಸ್ಪೀಟು ಅಂದ್ರೆ ತಮಾಷೆಯಲ್ಲ.
ಇಸ್ಪೀಟು ಅಂದ್ರೆ – ‘304′. ಅಣ್ಣನ ಮಾತು ಇದು.
ಚುರುಕು ತಲೆಯವರು ಮಾತ್ರ ಆಡಬಹುದಾದ ಆಟ. ಲೆಕ್ಕ ಬರುವವರು ಮಾತ್ರ ಆಡಬಹುದಾದ ಆಟ. ಲೆಕ್ಕ ತಪ್ಪಿದರೆ ಮುಜುಗರಕ್ಕೀಡುಮಾಡುವ ಆಟ… ಹೀಗೆ ಈ ಆಟದ ಗುಣಗಾನ ಮಾಡ್ತಾರೆ ನಮ್ಮ ಅಣ್ಣಾವ್ರು. ಊರಲ್ಲಿ ವಾರಗಟ್ಲೆ ಆಡಿ ಬಂದವ್ರು ಹದಿನೈದು ದಿನ ಆದ್ರೂ ಅದರ ಸುದ್ದಿ ಮಾತ್ರ ಬಿಟ್ಟಿಲ್ಲ. ವಿಜಯೋತ್ಸವದ್ದು ದೊಡ್ಡ ಸುದ್ದಿ. ಸೋತಲ್ಲೆಲ್ಲ ವಿಮರ್ಷೆ. ಕಾರಣ ಹುಡುಕುವಿಕೆ. ಬರೀ ಅದೇ ಸುದ್ದಿ.
ನಿಜ, ಇಸ್ಪೀಟು ಒಮ್ಮೆ ತಮಾಷೆ, ಮತ್ತೊಮ್ಮೆ ಗಂಭೀರ. ಒಮ್ಮೊಮ್ಮೆ ಮಾತು, ಒಮ್ಮೊಮ್ಮೆ ಮೌನ. ಇಸ್ಪೀಟು ರಾಗ, ವಿರಾಗ, ನೆನಪು, ಮರೆವು, ಸಂತೋಷ, ದು:ಖ, ಸಮಾನತೆ, ಅಸಮಾನತೆ, ರೂಪ, ವಿರೂಪ.. ಇಸ್ಪೀಟು ಎಲ್ಲ. ಇಸ್ಪೀಟು ಏನೂ ಅಲ್ಲ.
ಅಷ್ಟೇ ಅಲ್ಲ, ಒಮ್ಮೊಮ್ಮೆ ಇಸ್ಪೀಟು ಚಟ. ಇಸ್ಪೀಟು ಚಟ್ಟ.
ಅಣ್ಣ ಅಪರೂಪಕ್ಕೊಮ್ಮೆ ಆಡ್ತಾನೆ. ಆಟ ಅಂದ್ರೆ ‘304′, ಅಷ್ಟೆ. ಬಾಕಿ ಎಲ್ಲಾ ಬರಿ ಓಳು! ಅಂತಾನೆ. ಆಡುವವರು ಗಂಡು ಆಟ ಆಡಿ, ಬುದ್ದಿಯಿರುವವರಿಗಾಗಿ ಮಾತ್ರ ಇರುವ ಇದೊಂದೆ ಆಟ ಆಡಿ ಅಂದಿದಾನೆ. ಅದೂ ಆಗಾಗ, ಕೆಲವು ಹೊತ್ತು ಮಾತ್ರ.
ಆಡ್ಬೇಕು ಅಂತಿದ್ರೆ, ಲೆಕ್ಕಾಚಾರದ ಹಿಂದೆ ಬೀಳ್ಬೇಕು ಅಂತಿದ್ರೆ ಅಣ್ಣನ ಸಂಪರ್ಕ ಮಾಡಬಹುದು. ಆತ ಮನಸು ಮಾಡಿದರೆ ಉಚಿತ ತರಬೇತಿ. ಇಲ್ಲದಿದ್ದರೆ ಇಲ್ಲ. ಆತ ಇಲ್ಲಿಗೆ ಬಂದು ಆಟವನ್ನು ವಿವರಿಸಲೂಬಹುದು. ಇಲ್ಲ ಅಣ್ಣನನ್ನು ಸಂಪರ್ಕಿಸಬಹುದು – ’ispeetaata@gmail.com’
ಅಣ್ಣನ ಸೂಚನೆ: ಇಸ್ಪೀಟು ಆಡಿಬಿಡಿ. ಆಡಿ. ಬಿಡಿ. 304 ಕಲಿತುಬಿಡಿ. ಕಲಿತು ಬಿಡಿ. ಆದ್ರೆ ಯಾವ್ದನ್ನೂ ಚಟ ಮಾಡ್ಬೇಡಿ. ಅದೆಲ್ಲ ನಮ್ದಲ್ಲ ಅನ್ನೋರು ವಾರಾಂತ್ಯದ ಎರಡು ದಿನ ನಿಮ್ಮ ಮೂಲ ಊರಲ್ಲಿ ಏನು ಮಾಡ್ತಾರೆ, ನೀವಿರುವ ಊರಲ್ಲಿ ಏನು ಮಾಡ್ತಾರೆ ಅಂತ ಒಂದು ಪಟ್ಟಿ ಮಾಡಿ. ನಂಗೆ ಕಳ್ಸಿ.
ವಿ ಸೂಚನೆ: ಈ ಅಣ್ಣನಿಗೂ ಮಲ್ಲೇಶ್ವರ ಮಿತ್ರಮಂಡಳಿಯ ಅಣ್ಣನಿಗೂ ಯಾವುದೇ ಸಂಬಂಧ ಇಲ್ಲಾ..